ಕೊರೋನ ವೈರಸ್ಗೆ ಉತ್ತರಪ್ರದೇಶದ ಸಂಪುಟ ಸಚಿವೆ ಕಮಲ್ರಾಣಿ ಬಲಿ
ಲಕ್ನೊ, ಅ.2: ಕೆಲವು ದಿನಗಳ ಹಿಂದೆ ನೊವೆಲ್ ಕೊರೋನ ವೈರಸ್ ಸೋಂಕು ತಗಲಿದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉತ್ತರಪ್ರದೇಶ ಸರಕಾರದ ಸಂಪುಟ ಸಚಿವೆ ಕಮಲ್ರಾಣಿ ಅರುಣ್ ರವಿವಾರ ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 62 ವರ್ಷ ವಯಸ್ಸಾಗಿತ್ತು.
ಕಮಲ್ರಾಣಿ ದೇವಿ ಅವರು ಸಂಜಯ ಗಾಂಧಿ ವೈದ್ಯಕೀಯ ವಿಜ್ಞಾನ ಆಸ್ಪತ್ರೆಯಲ್ಲಿ ಬೆಳಗ್ಗೆ 9:30ಕ್ಕೆ ನಿಧನರಾಗಿದ್ದಾರೆ. ಕಮಲ್ರಾಣಿ ಕಳೆದ ಕೆಲವು ದಿನಗಳಿಂದ ಆಮ್ಲಜನಕ ಹಾಗೂ ಕೃತಕ ಉಸಿರಾಟದ ವ್ಯವಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಸರಕಾರದ ಮೂಲಗಳು ತಿಳಿಸಿವೆ.
ಕಮಲ್ರಾಣಿ ಅವರು ಆದಿತ್ಯನಾಥ ನೇತೃತ್ವದ ಸರಕಾರದಲ್ಲಿ ತಾಂತ್ರಿಕ ಶಿಕ್ಷಣ ಸಚಿವೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಮಲ್ರಾಣಿ ಗೆ ಜುಲೈ 18ರಂದು ಕೊರೋನ ವೈರಸ್ ಸೋಂಕು ದೃಢಪಟ್ಟ ತಕ್ಷಣ ಆಸ್ಪತ್ರೆಗೆ ದಾಖಲಾಗಿದ್ದರು.
ಕಮಲ್ರಾಣಿ ನಿಧನದ ಹಿನ್ನೆಲೆಯಲ್ಲಿ ಸಿಎಂ ಆದಿತ್ಯನಾಥ್ ತಮ್ಮ ಅಯೋಧ್ಯೆ ಪ್ರವಾಸವನ್ನು ರದ್ದುಪಡಿಸಿದ್ದಾರೆ. ಆದಿತ್ಯನಾಥ್ ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮ ತಯಾರಿ ನೋಡಲು ಅಯೋಧ್ಯೆಗೆ ತೆರಳಬೇಕಾಗಿತ್ತು.