ದೇವಾಂಗನಾ ಅಶಾಂತಿ ಸೃಷ್ಟಿಸುತ್ತಿದ್ದಾರೆಂಬ ಆರೋಪಕ್ಕೆ ಪುರಾವೆ ನೀಡಿ: ಪೊಲೀಸರಿಗೆ ದಿಲ್ಲಿ ಹೈಕೋರ್ಟ್ ಆದೇಶ
ಹೊಸದಿಲ್ಲಿ, ಆ.22: ಈಶಾನ್ಯ ದಿಲ್ಲಿಯಲ್ಲಿ ಈ ವರ್ಷದ ಆರಂಭದಲ್ಲಿ ನಡೆದ ಕೋಮು ಹಿಂಸಾಚಾರದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ‘ಪಿಂಜಿರಾ ತೋಡ್ ’ ಸಂಘಟನೆಯ ಕಾರ್ಯಕರ್ತೆ ದೇವಾಂಗನಾ ಕಲಿಟಾ ಪ್ರಚೋದನಕಾರಿ ಭಾಷಣಗಳನ್ನು ಮಾಡಿದ್ದಾರೆ ಎಂಬುದನ್ನು ಸಾಬೀತುಪಡಿಸುವ ಯಾವುದೇ ವಿಡಿಯೋ ತಮ್ಮ ಬಳಿ ಯಾಕಿಲ್ಲವೆಂದು ದಿಲ್ಲಿ ಹೈಕೋರ್ಟ್ ಪೊಲೀಸ್ ಇಲಾಖೆಯನ್ನು ಪ್ರಶ್ನಿಸಿದೆ.
ಜಾಮೀನು ಬಿಡುಗಡೆ ಕೋರಿ ದೇವಾಂಗನಾ ಸಲ್ಲಿಸಿದ ಅರ್ಜಿಯ ಮೇಲಿನ ತನ್ನ ಆದೇಶವನ್ನು ಕಾದಿರಿಸಿದ ಮುಖ್ಯ ನ್ಯಾಯಮೂರ್ತಿ ಸುರೇಶ್ ಕೈಟ್ ಅವರು, ‘‘ 2019ರಿಂಲೇ ದೇವಾಂಗನಾ ಅಶಾಂತಿಯನ್ನು ಸೃಷ್ಟಿಸುತ್ತಿದ್ದರಾದರೆ, ಆಕೆಯ ವಿರುದ್ಧ ಪೊಲೀಸರು ಪುರಾವೆಗಳನ್ನು ಸಂಗ್ರಹಿಸಬೇಕಿತ್ತು’’ ಎಂದರು. ದೇವಾಂಗನಾ ಅವರ ಭಾಷಣಗಳು ಪ್ರಚೋದನಕಾರಿಯೆಂಬುದನ್ನು ಸಾಬೀತುಪಡಿಸುವ ಯಾವುದೇ ಸಾಕ್ಷ್ಯಾಧಾರಗಳು ನಿಮ್ಮ ಬಳಿ ಇವೆಯೇ? ಎಂದು ನ್ಯಾಯಾಧೀಶರು ಪೊಲೀಸರಿಗೆ ಪ್ರಶ್ನಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ದಿಲ್ಲಿ ಪೊಲೀಸರು ದೇವಾಂಗನಾ ಕಾಲಿಟಾ ಹಾಗೂ ಪಿಂಜಿರಾ ಥೋಡ್ ಸಂಘಟನೆಯ ಇನ್ನೋರ್ವ ಸದಸ್ಯರನ್ನು ಬಂಧಿಸಿದ್ದರು, ಇವರಿಬ್ಬರ ವಿರುದ್ಧ ಗಲಭೆಯಲ್ಲಿ ಪಾಲ್ಗೊಂಡ, ಕಾನೂನುಬಾಹಿರವಾಗಿ ಸಭೆ ನಡೆಸಿದ ಹಾಗೂ ಪ್ರಚೋದನಕಾರಿ ಭಾಷಣ ಮಾಡಿದ ಆರೋಪ ಹೊರಿಸಲಾಗಿದೆ.