ನಮಗೆ ಬಹಿರಂಗ ಬೆದರಿಕೆಯೊಡ್ಡಿದ್ದ ಜಿಲ್ಲಾಧಿಕಾರಿ ಇನ್ನೂ ಅಮಾನತುಗೊಂಡಿಲ್ಲ: ಮೃತ ಯುವತಿಯ ಸೋದರ
ಹತ್ರಸ್ ಪ್ರಕರಣ
ಹತ್ರಸ್ (ಉ.ಪ್ರ),ಅ.4: ಹತ್ರಸ್ ಸಾಮೂಹಿಕ ಅತ್ಯಾಚಾರ-ಕೊಲೆ ಪ್ರಕರಣವನ್ನು ಖಂಡಿಸಿ ದೇಶವ್ಯಾಪಿ ಪ್ರತಿಭಟನೆಗಳು ಮತ್ತು ರಾಜಕೀಯ ಕೆಸರೆರಚಾಟಗಳ ನಡುವೆಯೇ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮೃತ ಯುವತಿಯ ಸೋದರ,‘ನಾವು ಎತ್ತಿರುವ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ,ಹೀಗಾಗಿ ಈಗ ನಡೆಯುತ್ತಿರುವ ತನಿಖೆಯು ನಮ್ಮ ಕುಟುಂಬಕ್ಕೆ ತೃಪ್ತಿಯನ್ನುಂಟು ಮಾಡಿಲ್ಲ ’ಎಂದು ಹೇಳಿದ್ದಾನೆ. ತನ್ನ ಕುಟುಂಬಕ್ಕೆ ಬಹಿರಂಗ ಬೆದರಿಕೆಯನ್ನೊಡ್ಡಿದ್ದ ಜಿಲ್ಲಾಧಿಕಾರಿ ಪ್ರವೀಣ ಕುಮಾರ್ ಅವರನ್ನು ಈವರೆಗೂ ಅಮಾನತುಗೊಳಿಸಿಲ್ಲ ಎಂದು ಆತ ಬೆಟ್ಟು ಮಾಡಿದ್ದಾನೆ. ಪ್ರಕರಣದ ತನಿಖೆಯಲ್ಲಿ ನಿರ್ಲಕ್ಷ್ಯ ತೋರಿಸಿದ್ದಕ್ಕಾಗಿ ಹತ್ರಸ್ ಎಸ್ಪಿ ಮತ್ತು ಡಿಎಸ್ಪಿ ಸೇರಿದಂತೆ ಐವರು ಪೊಲೀಸ್ ಅಧಿಕಾರಿಗಳನ್ನು ಉತ್ತರ ಪ್ರದೇಶ ಸರಕಾರವು ಶುಕ್ರವಾರ ಅಮಾನತುಗೊಳಿಸಿದ್ದು,ಎಸ್ಪಿ ಮತ್ತು ಡಿಎಸ್ಪಿಯನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲಾಗುವುದು. ಮೃತ ಯುವತಿಯ ಕುಟುಂಬ ಸದಸ್ಯರೂ ಪರೀಕ್ಷೆಗೊಳಗಾಗಬೇಕಾಗುತ್ತದೆ ಎಂದು ತಿಳಿಸಿತ್ತು.
Next Story