ರಾಹುಲ್ ಗಾಂಧಿ ವಿದೇಶಿ ಮನಸ್ಥಿತಿಯ ವ್ಯಕ್ತಿ: ಬಿಜೆಪಿ ಶಾಸಕ ಸುರೇಂದ್ರ ಸಿಂಗ್
ಬಲ್ಲಿಯಾ, ಅ.5: ಪೋಷಕರು ತಮ್ಮ ಹೆಣ್ಣುಮಕ್ಕಳಿಗೆ ಸಂಸ್ಕಾರ ಅಥವಾ ವೌಲ್ಯಗಳನ್ನು ಕಲಿಸಿದರೆ ಅತ್ಯಾಚಾರಗಳನ್ನು ನಿಲ್ಲಿಸಬಹುದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರವಿವಾರ ತೀವ್ರ ವಾಗ್ದಾಳಿ ನಡೆಸಿದ್ದರು. ಇದು ಅವರ ಕೋಮುವಾದಿ ಮನಸ್ಥಿತಿ ಎಂದು ರಾಹುಲ್ ಆರೋಪಿಸಿದ್ದರು.
ರಾಹುಲ್ ಹೇಳಿಕೆಗೆ ಇಂದು ಪ್ರತಿಕ್ರಿಯಿಸಿರುವ ಸಿಂಗ್, "ರಾಹುಲ್ ದ್ವಂದ್ವ ಸ್ವಭಾವ ಹಾಗೂ ವಿದೇಶಿ ಮನಸ್ಥಿತಿಯ ವ್ಯಕ್ತಿ. ಅವರು ಭಾರತೀಯ ಸಂಸ್ಕೃತಿಯ ಬಗ್ಗೆ ಸಂಪೂರ್ಣವಾಗಿ ಅಜ್ಞಾನ ಹೊಂದಿದ್ದಾರೆ'' ಎಂದು ಉತ್ತರಪ್ರದೇಶದ ಬಲ್ಲಿಯಾ ಕ್ಷೇತ್ರದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಸೋಮವಾರ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
"ರಾಹುಲ್ ಅವರು ರಾಷ್ಟ್ರೀಯವಾದಿಗಳಿಂದ ಟ್ಯೂಶನ್ ತೆಗೆದುಕೊಂಡರೆ ರಾಷ್ಟ್ರೀಯ ವ್ಯಾಖ್ಯಾನವನ್ನು ಅರ್ಥ ಮಾಡಿಕೊಳ್ಳುತ್ತಾರೆ. ದೇಶದ ಸಂಸ್ಕೃತಿಯ ತಿರುಳನ್ನು ಅವರು ಅರ್ಥ ಮಾಡಿಕೊಂಡಿಲ್ಲ. ರಾಹುಲ್ ಹಾಗೂ ಪ್ರಿಯಾಂಕಾ(ಗಾಂಧಿ ವಾದ್ರಾ)ಅವರ ಎರಡು ಸ್ವಭಾವ ಹತ್ರಸ್ನಲ್ಲಿ ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡುವ ಸಂದರ್ಭದಲ್ಲಿ ಸ್ಪಷ್ಟವಾಯಿತು. ಅವರು ಸಂತ್ರಸ್ತೆಯ ಕುಟುಂಬದ ಭೇಟಿಗೆ ತೆರಳುವ ಸಮಯದಲ್ಲಿ ನಗುತ್ತಿದ್ದರು. ಸಂತ್ರಸ್ತೆಯ ಮನೆಯಲ್ಲಿ ಕಣ್ಣೀರು ಸುರಿಸುತ್ತಿದ್ದರು ಎಂದು ಸಿಂಗ್ ಹೇಳಿದರು.