ಕಮಲನಾಥ್ ಬಿಜೆಪಿ ನಾಯಕಿಗೆ 'ಐಟಂ' ಪದ ಬಳಸಿದ್ದು ದುರದೃಷ್ಟಕರ: ರಾಹುಲ್ ಗಾಂಧಿ
ವಯನಾಡ್: ಮಧ್ಯಪ್ರದೇಶದ ಉಪ ಚುನಾವಣೆಯ ಪ್ರಚಾರದ ವೇಳೆ ಮಾಜಿ ಮುಖ್ಯಮಂತ್ರಿ ಕಮಲನಾಥ್ ಬಿಜೆಪಿಯ ಅಭ್ಯರ್ಥಿ ಇಮಾರ್ತಿ ದೇವಿ ಅವರ ಬಗ್ಗೆ ಐಟಂ ಪದ ಬಳಕೆ ಮಾಡಿರುವುದು ದುರದೃಷ್ಟಕರ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಈ ಮೂಲಕ ಕಮಲನಾಥ್ ಅವರ ವಿವಾದಾತ್ಮಕ ಹೇಳಿಕೆಯನ್ನು ಬಹಿರಂಗವಾಗಿ ಟೀಕಿಸಿದ ಮೊದಲ ಕಾಂಗ್ರೆಸ್ ನಾಯಕ ಎನಿಸಿಕೊಂಡರು.
ಕಮಲನಾಥ್ಜೀ ನಮ್ಮ ಪಕ್ಷದವರು. ಆದರೆ ವೈಯಕ್ತಿಕವಾಗಿ ಅವರು ಬಳಸಿದ ಭಾಷೆ ನನಗೆ ಇಷ್ಟವಾಗಿಲ್ಲ... ನಾನು ಅದನ್ನು ಪ್ರಶಂಸಿಸುವುದಿಲ್ಲ. ಇಂತಹ ಹೇಳಿಕೆ ದುರದೃಷ್ಟಕರ ಎಂದು ಸುದ್ದಿಗಾರರಿಗೆ ರಾಹುಲ್ ತಿಳಿಸಿದರು.
ಕಮಲನಾಥ್ ಅವರ ವಿವಾದಾತ್ಮಕ ಹೇಳಿಕೆಯ ಬಗ್ಗೆಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮೌನ ಪ್ರತಿಭಟನೆ ನಡೆಸಿದ್ದಲ್ಲದೆ ಈ ವಿಷಯದ ಕುರಿತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರವನ್ನು ಬರೆದಿದ್ದರು. ಇಮಾರ್ತಿದೇವಿ ಅವರು ಕಾಂಗ್ರೆಸ್ ಅಧ್ಯಕ್ಷೆಗೆ ಮನವಿ ಮಾಡಿದ್ದು, ನಿಮ್ಮ ಮಗಳ ಬಗ್ಗೆ ಈ ಹೇಳಿಕೆ ನೀಡಿದ್ದರೆ ನೀವು ಕ್ಷಮಿಸುತ್ತಿದ್ದೀರಾ ಎಂದು ಕೇಳಿದ್ದರು.
ಕಾಂಗ್ರೆಸ್ ಅಭ್ಯರ್ಥಿ ಸುರೇಶ್ ರಾಜೇ ಪರ ಚುನಾವಣಾ ಪ್ರಚಾರ ಮಾಡಿದ್ದ ಕಮಲನಾಥ್, ಸುರೇಶ್ ಎದುರಾಳಿ ಅಭ್ಯರ್ಥಿಯಂತಲ್ಲ. ಇವರು ತುಂಬಾ ಸರಳ ವ್ಯಕ್ತಿ. ಎದುರಾಳಿ ಒಂದು ಐಟಂ. ನಾನು ಎದುರಾಳಿ ಅಭ್ಯರ್ಥಿಯ ಹೆಸರನ್ನು ಏಕೆ ಹೇಳಬೇಕು. ನೀವೆಲ್ಲರೂ ಆಕೆಯ ಬಗ್ಗೆ ನನಗಿಂತ ಚೆನ್ನಾಗಿ ತಿಳಿದುಕೊಂಡಿದ್ದೀರಿ ಎಂದು ಹೇಳಿದ್ದರು.