ನಕಲಿ ರೇಟಿಂಗ್ಸ್ ಹಗರಣ: ಪ್ರಕರಣ ದಾಖಲಿಸಿಕೊಂಡ ಸಿಬಿಐ
ಹೊಸದಿಲ್ಲಿ, ಅ.20: ಉತ್ತರಪ್ರದೇಶದಲ್ಲಿ ಸಲ್ಲಿಸಿದ ದೂರಿನ ಆಧಾರದಲ್ಲಿ ನಕಲಿ ರೇಟಿಂಗ್ಸ್ ಹಗರಣದ ಬಗ್ಗೆ ತನಿಖೆ ನಡೆಸಲು ಸಿಬಿಐ ಪ್ರಕರಣ ದಾಖಲಿಸಿಕೊಂಡಿರುವುದಾಗಿ ವರದಿಯಾಗಿದೆ. ರವಿವಾರ ‘ಗೋಲ್ಡನ್ ರ್ಯಾಬಿಟ್ ಕಮ್ಯುನಿಕೇಷನ್ಸ್’ನ ದೂರಿನ ಆಧಾರದಲ್ಲಿ ಉತ್ತರಪ್ರದೇಶದ ಲಕ್ನೋ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರಕಾರ ಮಾಡಿದ್ದ ಶಿಫಾರಸನ್ನು 24 ಗಂಟೆಯೊಳಗೆ ಕೇಂದ್ರ ಸರಕಾರ ಅನುಮೋದಿಸಿದೆ.
ಟಿಆರ್ಪಿ ಹಗರಣದ ಕುರಿತ ದಾಖಲೆಗಳನ್ನು ಸಂಗ್ರಹಿಸಲು ಸಿಬಿಐನ ತಂಡವೊಂದು ಲಕ್ನೋಗೆ ತೆರಳಿದೆ. ಅಜ್ಞಾತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಮೂಲಗಳು ಹೇಳಿವೆ. ಸುಷಾಂತ್ ಸಿಂಗ್ ರಜಪೂತ್ ಪ್ರಕರಣವೂ ಇದೇ ರೀತಿ ಮುಂಬೈ ಪೊಲೀಸರಿಂದ ಸಿಬಿಐಗೆ ಹಸ್ತಾಂತರವಾಗುವ ಮೊದಲು, ಬಿಜೆಪಿ ಆಡಳಿತದ ರಾಜ್ಯದಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿತ್ತು. ರಿಪಬ್ಲಿಕ್ ಟಿವಿ ಸಹಿತ ಮೂರು ಚಾನೆಲ್ಗಳು ಟಿಆರ್ಪಿ ಹೆಚ್ಚಿಸಿಕೊಳ್ಳಲು ಅವ್ಯವಹಾರ ನಡೆಸಿವೆ ಎಂಬ ದೂರಿನ ಆಧಾರದಲ್ಲಿ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದರು. ಆದರೆ ಸುಷಾಂತ್ ಸಿಂಗ್ ಪ್ರಕರಣದಲ್ಲಿ ಮುಂಬೈ ಪೊಲೀಸರು ರಿಪಬ್ಲಿಕ್ ಟಿವಿಯ ಬಗ್ಗೆ ಅಸಮಾಧಾನ ಹೊಂದಿದ್ದು ಪ್ರಕರಣದ ತನಿಖೆ ಸರಿಯಾಗಿ ನಡೆಯುವ ಬಗ್ಗೆ ಸಂಶಯವಿದೆ. ಆದ್ದರಿಂದ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಬೇಕು ಎಂದು ರಿಪಬ್ಲಿಕ್ ಟಿವಿ ಒತ್ತಾಯಿಸಿತ್ತು.