ಮಧ್ಯಪ್ರದೇಶ: ಇಬ್ಬರು ಸಚಿವರ ರಾಜೀನಾಮೆ
ಭೋಪಾಲ್, ಅ.21: ಮಧ್ಯಪ್ರದೇಶದ ಸಚಿವರಾದ ತುಳಸೀರಾಮ್ ಸಿಲಾವತ್ ಹಾಗೂ ಗೋವಿಂದ್ ರಜಪೂತ್ ಬುಧವಾರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಉಪಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇವರಿಬ್ಬರೂ ಶಾಸಕರಾಗಿರಲಿಲ್ಲ. ಸಂವಿಧಾನದ 164(4)ನೇ ಪರಿಚ್ಛೇದದ ಪ್ರಕಾರ, ವಿಧಾನಸಭೆಯ ಶಾಸಕನಲ್ಲದ ಸಚಿವರು, ಸಚಿವನಾಗಿ ಪ್ರಮಾಣವಚನ ಸ್ವೀಕರಿಸಿದ 6 ತಿಂಗಳೊಳಗೆ ಶಾಸಕನಾಗಿ ಆಯ್ಕೆಯಾಗಬೇಕು. ಇಲ್ಲದಿದ್ದರೆ ಅವರ ಸಚಿವ ಸ್ಥಾನ ರದ್ದಾಗುತ್ತದೆ. ಸಿಲಾವತ್ ಮತ್ತು ರಜಪೂತ್ ಎಪ್ರಿಲ್ 21ರಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದು ಅಕ್ಟೋಬರ್ 21ರೊಳಗೆ ಶಾಸಕರಾಗಿ ಆಯ್ಕೆಯಾಗಬೇಕಿತ್ತು. ಇದೀಗ ನವೆಂಬರ್ 3ರಂದು ನಡೆಯುವ ಉಪಚುನಾವಣೆಯಲ್ಲಿ ಇಬ್ಬರೂ ಸ್ಪರ್ಧಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
Next Story