ಸಂಸದೀಯ ಸಮಿತಿ ಮುಂದೆ ಹಾಜರಾದ ಫೇಸ್ ಬುಕ್ ಇಂಡಿಯಾ ಮುಖ್ಯಸ್ಥೆ ಅಂಖಿದಾಸ್
ಹೊಸದಿಲ್ಲಿ : ದ್ವೇಷಯುಕ್ತ ಪೋಸ್ಟ್ ಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ತಾರತಮ್ಯಕಾರಿ ನಿಲುವು ಅನುಸರಿಸಿದ್ದಾರೆಂಬ ಆರೋಪ ಎದುರಿಸುತ್ತಿರುವ ಫೇಸ್ ಬುಕ್ ಇಂಡಿಯಾದ ಪಾಲಿಸಿ ಮುಖ್ಯಸ್ಥೆ ಅಂಖಿ ದಾಸ್ ಅವರನ್ನು ಸಂಸದೀಯ ಸಮಿತಿ ಇಂದು ಎರಡು ಗಂಟೆಗಳ ಕಾಲ ಪ್ರಶ್ನಿಸಿದೆ. ಅಂಖಿ ದಾಸ್ ಜತೆಗೆ ಫೇಸ್ ಬುಕ್ ಬಿಸಿನೆಸ್ ಮುಖ್ಯಸ್ಥ ಅಜಿತ್ ಮೋಹನ್ ಕೂಡ ಸಮಿತಿ ಮುಂದೆ ಹಾಜರಾಗಿದ್ದಾರೆ.
ಡಾಟಾ ಸಂರಕ್ಷಣೆ ಕುರಿತಂತೆ ಇಬ್ಬರನ್ನೂ ಪ್ರಶ್ನಿಸಲಾಯಿತು . ಜಾಹೀರಾತು ಅಥವಾ ವ್ಯವಹಾರ ಅಥವಾ ಚುನಾವಣೆಗಳಲ್ಲಿ ನಾಗರಿಕರ ವೈಯಕ್ತಿಕ ಮಾಹಿತಿಯನ್ನು ತಾರ್ಕಿಕ ಉದ್ದೇಶಗಳಿಗಾಗಿ ಬಳಸಲು ಸಾಧ್ಯವಿಲ್ಲ ಎಂದೂ ಅವರಿಗೆ ಹೇಳಲಾಯಿತು ಎಂದು ಮೂಲಗಳು ತಿಳಿಸಿವೆ. ಡಾಟಾ ಸಂರಕ್ಷಣೆಗಾಗಿ ಫೇಸ್ ಬುಕ್ ತನ್ನ ಆದಾಯದ ಎಷ್ಟು ಭಾಗವನ್ನು ಮೀಸಲಿರಿಸಿದೆ ಎಂಬ ನಿರ್ದಿಷ್ಟ ಪ್ರಶ್ನೆಯನ್ನೂ ಅವರಿಗೆ ಕೇಳಲಾಯಿತು. ಜತೆಗೆ ಫೇಸ್ಬುಕ್ಗೆ ಭಾರತದಲ್ಲಿ ಎಷ್ಟು ಆದಾಯ ದೊರೆಯುತ್ತಿದೆ ಹಾಗೂ ಎಷ್ಟು ತೆರಿಗೆ ಪಾವತಿಸುತ್ತಿದೆ ಎಂಬುದನ್ನೂ ಪ್ರಶ್ನಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಟ್ವಿಟ್ಟರ್ ಮತ್ತು ಅಮೆಝಾನ್ಗೂ ಸಮಿತಿ ಮುಂದೆ ಅಕ್ಟೋಬರ್ 28ರಂದು ಹಾಜರಾಗಲು ಹೇಳಲಾಗಿದೆ. ಆದರೆ ತನ್ನ ತಜ್ಞರು ವಿದೇಶಗಳಲ್ಲ್ಲಿರುವುದರಿಂದ ಕೋವಿಡ್ ಸಮಸ್ಯೆಯಿಂದ ಅವರಿಗೆ ಇಲ್ಲಿಗೆ ಆಗಮಿಸಲು ಸಾಧ್ಯವಿಲ್ಲದೇ ಇರುವುದರಿಂದ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಅಮೆಝಾನ್ ಹೇಳಿದೆ.
ಅಮೆಝಾನ್ ವಿಚಾರಣೆಗೆ ಹಾಜರಾಗಲು ನಿರಾಕರಿಸಿರುವುದು ಸವಲತ್ತಿನ ಹಕ್ಕುಚ್ಯುತಿ ಎಂದು ಸಂಸತ್ ಮೂಲಗಳು ತಿಳಿಸಿವೆಯಲ್ಲದೆ ಅಮೆಝಾನ್ ಅಧಿಕಾರಿಗಳು ಹಾಜರಾಗಲು ವಿಫಲರಾದಲ್ಲಿ ಕಠಿಣ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.