ವೈನ್ಶಾಪ್ನ ಫ್ರೀಝರ್ನಲ್ಲಿ ನೌಕರನ ಮೃತದೇಹ ಪತ್ತೆ
ಜೈಪುರ, ಅ.26: ರಾಜಸ್ಥಾನದ ಅಲ್ವಾರ್ನಲ್ಲಿ ವೈನ್ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದ ನೌಕರನ ಸುಟ್ಟುಹೋದ ಮೃತದೇಹ ವೈನ್ಶಾಪ್ನ ಫ್ರೀಝರ್ನಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಕಮಲ್ ಕಿಶೋರ್ ಎಂಬಾತ ಮೃತ ಯುವಕನಾಗಿದ್ದು ವೈನ್ಶಾಪ್ನ ಮಾಲಕರು ಕಿಶೋರ್ನನ್ನು ಬೆಂಕಿಹಚ್ಚಿ ಸಾಯಿಸಿ ಬಳಿಕ ಮೃತದೇಹವನ್ನು ಫ್ರೀಝರ್ನಲ್ಲಿಟ್ಟಿದ್ದಾರೆ ಎಂದು ಮೃತನ ಕುಟುಂಬದವರು ಆರೋಪಿಸಿದ್ದಾರೆ. ಅಲ್ವಾರ್ನ ಕುಂಪುರ್ ಗ್ರಾಮದಲ್ಲಿ ರಾಕೇಶ್ ಯಾದವ್ ಮತ್ತು ಸುಭಾಷ್ ಚಂದ್ ಮಾಲಕತ್ವದ ವೈನ್ಶಾಪ್ನಲ್ಲಿ ಕಿಶೋರ್ ಕೆಲಸ ಮಾಡುತ್ತಿದ್ದ. ಆದರೆ ಕಳೆದ 5 ತಿಂಗಳಿಂದ ವೇತನ ನೀಡದ ಕಾರಣ ಕಿಶೋರ್ ಮನೆಗೆ ವಾಪಸಾಗಿದ್ದ. ಶನಿವಾರ ಕಿಶೋರ್ನ ಮನೆಗೆ ಬಂದ ಯಾದವ್ ಮತ್ತು ಚಂದ್ ತಮ್ಮೊಂದಿಗೆ ಆತನನ್ನು ಕರೆದೊಯ್ದಿದ್ದು ಅಂದಿನಿಂದ ಆತ ಮನೆಗೆ ಹಿಂತಿರುಗಿಲ್ಲ ಎಂದು ಮನೆಯವರು ದೂರಿದ್ದಾರೆ. ರವಿವಾರ ವೈನ್ಶಾಪ್ನ ಹಿಂಬದಿ ನಿಲ್ಲಿಸಲಾಗಿದ್ದ ಕಂಟೈನರ್ಗೆ ಬೆಂಕಿ ಹತ್ತಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಬೆಂಕಿ ನಂದಿಸಿದ ಪೊಲೀಸರು, ಕಂಟೈನರ್ನಲ್ಲಿದ್ದ ಫ್ರೀಝರ್ನಲ್ಲಿ ಕಿಶೋರ್ನ ಸುಟ್ಟ ಮೃತದೇಹವನ್ನು ಪತ್ತೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಭಿವಾಡಿ ಪೊಲೀಸ್ ಅಧೀಕ್ಷಕ ರಾಮಮೂರ್ತಿ ಜೋಷಿ ಹೇಳಿದ್ದಾರೆ.