ದಿಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಸುಗ್ರೀವಾಜ್ಞೆ ಹೊರಡಿಸಲಿರುವ ಕೇಂದ್ರ
ತಪ್ಪಿತಸ್ಥರಿಗೆ ಕಾದಿದೆ 1 ಕೋಟಿ ರೂ. ದಂಡ ಅಥವಾ 5 ವರ್ಷ ಜೈಲು
ಹೊಸದಿಲ್ಲಿ : ರಾಜಧಾನಿ ದಿಲ್ಲಿಯಲ್ಲಿ ವಾಯು ಮಾಲಿನ್ಯ ಸಮಸ್ಯೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಸುಗ್ರೀವಾಜ್ಞೆಯ ಮೂಲಕ ಹೊಸ ಕಾನೂನು ಜಾರಿಗೆ ಸಿದ್ಧತೆ ನಡೆಸಿದ್ದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಂಕಿತ ದೊರೆತ ಕೂಡಲೇ ಅದು ಜಾರಿಯಾಗಲಿದೆ. ಈ ಹೊಸ ಕಾನೂನಿನಂತೆ ಮಾಲಿನ್ಯ ನಿಯಂತ್ರಣ ಕುರಿತಾದ ನಿಯಮಗಳನ್ನು ಉಲ್ಲಂಘಿಸುವವರು ರೂ. 1 ಕೋಟಿ ತನಕ ದಂಡ ಅಥವಾ ಐದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಿದೆ ಅಥವಾ ದಂಡ ಮತ್ತು ಜೈಲುಶಿಕ್ಷೆ ಎರಡನ್ನೂ ವಿಧಿಸಬಹುದಾಗಿದೆ.
ರಾಜಧಾನಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ವಾಯು ಗುಣಮಟ್ಟ ನಿರ್ವಹಣೆಗೆ ಆಯೋಗವೊಂದನ್ನು ರಚಿಸುವುದೂ ಸೂಕ್ತ ಎಂದು ಸುಗ್ರೀವಾಜ್ಞೆಯಲ್ಲಿ ಹೇಳಲಾಗಿದೆ.
ಈ ಹೊಸ ಕಾನೂನಿನಂತೆ ಮಾಲಿನ್ಯ ನಿಯಂತ್ರಣಕ್ಕಾಗಿ ಕಠಿಣ ಕ್ರಮ ಕೈಗೊಳ್ಳಲು 20 ಸದಸ್ಯರ ಸಮಿತಿ ರಚಿಸಲಾಗುವುದು ಸ್ವಯಂಪ್ರೇರಣೆಯಿಂದ ಆದೇಶ ನೀಡಲು ಹಾಗೂ ಪ್ರಸ್ತುತ ಮಾಲಿನ್ಯ ನಿಯಂತ್ರಣ ಕಾಯಿದೆ ವ್ಯಾಪ್ತಿಗೆ ಸಂಬಂಧಿಸಿದ ದೂರುಗಳನ್ನು ಪರಿಶೀಲಿಸುವ ಅಧಿಕಾರ ಅದಕ್ಕಿರಲಿದೆ.
ಈ ಹೊಸ ಸುಗ್ರೀವಾಜ್ಞೆಯನ್ನು ಕಮಿಷನ್ ಫಾರ್ ಏರ್ ಕ್ವಾಲಿಟಿ ಮ್ಯಾನೇಜ್ಮೆಂಟ್ ಇನ್ ದಿ ನ್ಯಾಷನಲ್ ಕ್ಯಾಪಿಟಲ್ ರೀಜನ್ ಎಂಡ್ ಅಡ್ಜಾಯ್ನಿಂಗ್ ಏರಿಯಾಸ್ ಆರ್ಡಿನೆನ್ಸ್ 2020 ಎಂದು ಹೆಸರಿಸಲಾಗುವುದು.
ರಚಿಸಲಾಗುವ ಹೊಸ ಆಯೋಗಕ್ಕೆ ಕೇಂದ್ರ ಸರಕಾರವೇ ಪೂರ್ಣಕಾಲಿಕ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಿಸಲಿದೆ.
ಪ್ರತಿ ವರ್ಷದಂತೆ ದಿಲ್ಲಿಯಲ್ಲಿ ಈ ವರ್ಷವೂ ವಾಯುಮಾಲಿನ್ಯ ಅತ್ಯಧಿಕ ಪ್ರಮಾಣದಲ್ಲಿದೆ.