ಕಂಗನಾ ರಾಣಾವತ್, ಸೋದರಿ ರಂಗೋಲಿಗೆ ಮುಂಬೈ ಪೊಲೀಸರಿಂದ ಮತ್ತೆ ಸಮನ್ಸ್
ಮುಂಬೈ,ನ.3:ತಮ್ಮ ಹೇಳಿಕೆಗಳ ಮೂಲಕ ಸಮುದಾಯಗಳ ನಡುವೆ ದ್ವೇಷವನ್ನು ಪ್ರಚೋದಿಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಾಲಿವುಡ್ ನಟಿ ಕಂಗನಾ ರಾಣಾವತ್ ಮತ್ತು ಅವರ ಸೋದರಿ ರಂಗೋಲಿ ಚಾಂದೇಲ್ ಅವರಿಗೆ ಮುಂಬೈ ಪೊಲೀಸರು ಎರಡನೇ ಬಾರಿ ಸಮನ್ಸ್ ಹೊರಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನ.10 ಮತ್ತು ನ.11ರಂದು ತಮ್ಮೆದುರು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಅವರಿಗೆ ಸೂಚಿಸಿದ್ದಾರೆ.
ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡಿದ ಆರೋಪದಲ್ಲಿ ಕಂಗನಾ ವಿರುದ್ಧ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದಕ್ಕೂ ಮುನ್ನ ಅ.21ರಂದು ಕಂಗನಾ ಮತ್ತು ರಂಗೋಲಿ ಅವರಿಗೆ ನೋಟಿಸ್ ಹೊರಡಿಸಿದ್ದ ಪೊಲೀಸರು ತಮ್ಮೆದುರು ಹಾಜರಾಗಿ ಹೇಳಿಕೆಗಳನ್ನು ದಾಖಲಿಸುವಂತೆ ಸೂಚಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಕಂಗನಾರ ನ್ಯಾಯವಾದಿಗಳು,ತನ್ನ ಕಕ್ಷಿದಾರರು ಹಿಮಾಚಲ ಪ್ರದೇಶದಲ್ಲಿದ್ದು,ಸೋದರನ ಮದುವೆಯ ಸಿದ್ಧತೆಗಳಲ್ಲಿ ವ್ಯಸ್ತರಾಗಿದ್ದಾರೆ ಎಂದು ತಿಳಿಸಿದ್ದರು.
ಕಂಗನಾ ಮತ್ತು ರಂಗೋಲಿ ಅವರ ಟ್ವೀಟ್ಗಳು ಮತ್ತು ಇತರ ಹೇಳಿಕೆಗಳನ್ನು ಪ್ರಸ್ತಾಪಿಸಿ ಬಾಲಿವುಡ್ ಕಾಸ್ಟಿಂಗ್ ನಿರ್ದೇಶಕ ಮತ್ತು ಫಿಟ್ನೆಸ್ ತರಬೇತುದಾರ ಮುನಾವರ್ ಅಲಿ ಸಯ್ಯದ್ ಅವರು ಸಲ್ಲಿಸಿದ್ದ ದೂರಿನ ಬಗ್ಗೆ ತನಿಖೆ ನಡೆಸುವಂತೆ ಬಾಂದ್ರಾ ಮಹಾನಗರ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಕಳೆದ ತಿಂಗಳು ಪೊಲೀಸರಿಗೆ ಆದೇಶಿಸಿತ್ತು.