ಬ್ಯಾಂಕಿಂಗ್ ಕ್ಷೇತ್ರ ಇನ್ನಷ್ಟು ಆರ್ಥಿಕ ಒತ್ತಡ ತಾಳಿಕೊಳ್ಳದು: ಸುಪ್ರೀಂಕೋರ್ಟ್ಗೆ ಕೇಂದ್ರದ ಹೇಳಿಕೆ
ಹೊಸದಿಲ್ಲಿ, ನ.19: ಬ್ಯಾಂಕಿಂಗ್ ಕ್ಷೇತ್ರ ಇನ್ನಷ್ಟು ಆರ್ಥಿಕ ಒತ್ತಡವನ್ನು ತಾಳಿಕೊಳ್ಳುವ ಸ್ಥಿತಿಯಲ್ಲಿಲ್ಲ ಎಂದು ಕೇಂದ್ರ ಸರಕಾರ ಸುಪ್ರೀಂಕೋರ್ಟ್ನಲ್ಲಿ ಹೇಳಿಕೆ ನೀಡಿದೆ. ಕೊರೋನ ಸೋಂಕಿಗೆ ಸಂಬಂಧಿಸಿದ ಲಾಕ್ಡೌನ್ ಅವಧಿಯಲ್ಲಿ ಮುಂದೂಡಿರುವ ಇಎಂಐ ಪಾವತಿಯ ಮೇಲೆ ಹೆಚ್ಚುವರಿ ಬಡ್ಡಿ ವಿಧಿಸುವ ಬಗ್ಗೆ ನಿರ್ಧರಿಸುವ ಪ್ರಕ್ರಿಯೆ ಸುಪ್ರೀಂಕೋರ್ಟ್ನಲ್ಲಿ ನಡೆಯುತ್ತಿದೆ.
ಬ್ಯಾಂಕ್ಗಳು ಬಡ್ಡಿಯ ಮೇಲೆ ಬಡ್ಡಿ ಅಥವಾ ಚಕ್ರಬಡ್ಡಿ ವಿಧಿಸುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಡೆಸುತ್ತಿದೆ. ಇದು ಆರ್ಥಿಕ ನೀತಿಗೆ ಸಂಬಂಧಿಸಿದ ವಿಷಯವಾಗಿದ್ದು ಈ ಬಗ್ಗೆ ಕೇಂದ್ರ ಸರಕಾರವೇ ನಿರ್ಧರಿಸಬೇಕು ಎಂದು ಕೇಂದ್ರ ಸರಕಾರ ಸುಪ್ರೀಂಕೋರ್ಟ್ಗೆ ಸಲ್ಲಿಸಿದ ಉತ್ತರದಲ್ಲಿ ಉಲ್ಲೇಖಿಸಿದೆ. 2 ಕೋಟಿವರೆಗಿನ ಸಾಲಕ್ಕೆ ಚಕ್ರಬಡ್ಡಿ ಮನ್ನಾ ಮಾಡುವುದು ಬ್ಯಾಂಕ್ಗಳ ಜವಾಬ್ದಾರಿಯಾಗಿದೆ. ಮೊರಟೋರಿಯಂ ಅವಧಿಯಲ್ಲಿ ಇವಿಎಂ ಪಾವತಿಸಿದವರಿಗೆ ಶಿಕ್ಷೆಯಾಗಬಾರದು. ಕೊರೋನ ಸೋಂಕಿನಿಂದಾಗಿ ಸಮಾಜದ ಮೇಲೆ ಹೆಚ್ಚಿನ ಹೊರೆ ಬೀಳದಂತೆ ವಿತ್ತ ಸಚಿವಾಲಯ ಮತ್ತು ಆರ್ಬಿಐ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು. ವೈಯಕ್ತಿಕ ಸಾಲಗಾರರ ರಕ್ಷಣೆಗೆ ನಿಂತಿರುವ ಸುಪ್ರೀಂಕೋರ್ಟ್ಗೆ ಕೃತಜ್ಞತೆ ಸಲ್ಲಿಸುವುದಾಗಿ ಚಕ್ರಬಡ್ಡಿ ವಿಧಿಸಬಾರದು ಎಂದು ಕೋರಿ ಅರ್ಜಿ ಸಲ್ಲಿಸಿದ್ದವರು ಹೇಳಿದ್ದಾರೆ.