ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಯುವ ರೈತನ ಸಾಹಸದ ವೀಡಿಯೊ ವೈರಲ್
ಹೊಸದಿಲ್ಲಿ: ನರೇಂದ್ರ ಮೋದಿ ನೇತೃತ್ವದ ಸರಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಪಂಜಾಬ್ ಹಾಗೂ ಹರ್ಯಾಣ ರೈತರು ದಿಲ್ಲಿಯತ್ತ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದಾಗ ಭಾರೀ ಪೊಲೀಸ್ ಹಾಗೂ ಅರೆ ಮಿಲಿಟರಿ ಪಡೆಯನ್ನು ಎದುರಿಸಬೇಕಾಯಿತ್ತಲ್ಲದೆ , ಜಲಫಿರಂಗಿ, ಬ್ಯಾರಿಕೇಡ್ ಗಳ ಮೂಲಕ ರೈತರನ್ನು ತಡೆದು ಬಂಧಿಸಲಾಯಿತು.
ಈ ಎಲ್ಲ ಅಡೆತಡೆಗಳ ನಡುವೆಯೂ ಪಂಜಾಬ್ ನಿಂದ ಬರಿಗಾಲಲ್ಲಿ ಪ್ರತಿಭಟನಾ ಮೆರವಣಿಗೆ ಹೊರಟ ವೃದ್ದೆ, ಇಬ್ಬರು ರೈತರು ರಸ್ತೆಯಲ್ಲಿ ತಮ್ಮ ಮೇಲೆ ಪ್ರಯೋಗಿಸಿದ್ದ ಜಲಫಿರಂಗಿಯನ್ನು ದಿಟ್ಟವಾಗಿ ಎದುರಿಸಿರುವುದು ಸೇರಿದಂತೆ ಹಲವು ಚಿತ್ರಗಳು ಪ್ರತಿಭಟನಾನಿರತ ರೈತರ ಆಕ್ರೋಶವನ್ನು ಪ್ರತಿನಿಧಿಸುತ್ತಿದ್ದವು.
ಆದರೆ ಒಂದು ಪ್ರಮುಖ ವೀಡಿಯೊ ಮಾತ್ರ ಎಲ್ಲರ ಗಮನ ಸೆಳೆದಿದೆ. ನವದೀಪ್ ಸಿಂಗ್ ಹೆಸರಿನ ಯುವಕ ಜಲಫಿರಂಗಿಯನ್ನು ಹೊತ್ತಿದ್ದ ವಾಹನದ ಮೇಲೆ ಹತ್ತಿ ಜಲಫಿರಂಗಿಯ ಟ್ಯಾಪ್ ಅನ್ನು ಆಫ್ ಮಾಡಿದರು. ಜಲಫಿರಂಗಿಯಿಂದ ಕಂಗಾಲಾಗಿದ್ದ ಹಲವು ರೈತರಿಗೆ ನೆರವಾಗಿದ್ದಾರೆ. ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸದ್ದುಮಾಡಿದೆ.
ಈ ಘಟನೆಯು ಕುರುಕ್ಷೇತ್ರದ ಸಮೀಪ ನಡೆದಿದೆ, ನವದೀಪ್ ಪೊಲೀಸರ ಲಾಠಿಚಾರ್ಜ್ ಗೆ ಹೆದರದೆ ಜಲಫಿರಂಗಿಯ ಟ್ರಕ್ ಮೇಲೇರಿ ಟ್ಯಾಪ್ ಆಫ್ ಮಾಡಿದರು. ಬಳಿಕ ಟ್ರ್ಯಾಕ್ಟರ್ ಟ್ರೋಲಿ ಮೇಲೆ ಜಂಪ್ ಮಾಡಿದರು. ನವದೀಪ್ ಅಂಬಾಲ ಜಿಲ್ಲೆಯ ಪದವೀಧರನಾಗಿದ್ದು, 250ಕ್ಕೂ ಅಧಿಕ ಗ್ರಾಮದ ರೈತರೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
"ನಾನು ಟ್ರ್ಯಾಕ್ಟರ್ ಟ್ರೋಲಿಯ ಮೂಲಕ ಟ್ರಕ್ ಏರಿದ್ದೆ. ಟ್ಯಾಪ್ ಬಳಿ ತೆರಳಿ ಅದನ್ನು ಆಫ್ ಮಾಡಿದೆ. ನನ್ನನ್ನು ಹಿಂಬಾಲಿಸಿ ಪೊಲೀಸರು ನನ್ನ ಜೊತೆ ಟ್ರಕ್ ಏರಿದ್ದರು. ಆ ಸಮಯದಲ್ಲಿ ನನ್ನ ಸಹೋದರ ನನ್ನ ಬಳಿ ಟ್ರ್ಯಾಕ್ಟರ್ ನಿಲ್ಲಿಸಿದ್ದ. ನಾನು ಅದರ ಮೇಲೆ ಜಿಗಿದೆ'' ಎಂದು ಟ್ರಕ್ ಮೇಲೆ ಹತ್ತಿದ ಕುರಿತು ಯುವಕ ನವದೀಪ್ ವಿವರಿಸಿದರು.
How a young farmer from Ambala Navdeep Singh braved police lathis to climb and turn off the water cannon tap and jump back on to a tractor trolley #farmersprotesthttps://t.co/Y9RZJBdD8E pic.twitter.com/NcN0JpMxd2
— Aditya Menon (@AdityaMenon22) November 26, 2020