ಅನ್ನದಾತ ರೈತರನ್ನು ಬೆಂಬಲಿಸುವುದು ನಮ್ಮ ಕರ್ತವ್ಯ: ರಾಹುಲ್ ಗಾಂಧಿ
ಹೊಸದಿಲ್ಲಿ, ಡಿ.5: ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಸಂಪೂರ್ಣವಾಗಿ ಹಿಂದಕ್ಕೆ ಪಡೆಯಬೇಕೆಂಬ ರೈತರ ಬೇಡಿಕೆಗೆ ಎಲ್ಲಾ ಭಾರತೀಯರೂ ಬೆಂಬಲ ಸೂಚಿಸಬೇಕು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ಹೊಸ ಕಾಯ್ದೆಗಳ ಕುರಿತು ಪ್ರಧಾನಿ ಮೋದಿ ರೈತರ ದಾರಿ ತಪ್ಪಿಸುತ್ತಿದ್ದಾರೆ. ಬಿಹಾರದಲ್ಲಿ 2006ರಲ್ಲಿ ನಿತೀಶ್ ಕುಮಾರ್ ಸರಕಾರ ಎಪಿಎಂಸಿ ವ್ಯವಸ್ಥೆಯನ್ನು ರದ್ದುಗೊಳಿಸಿದ ಬಳಿಕ ರೈತರಿಗೆ ಅನುಕೂಲವಾಗಿದೆ ಎಂಬ ಪ್ರಧಾನಿಯವರ ಹೇಳಿಕೆ ಸರಿಯಲ್ಲ. ಬಿಹಾರದ ರೈತರಿಗೆ ಈಗ ಬಹಳ ತೊಂದರೆಯಾಗಿದೆ. ಫಸಲು ಕೈಗೆ ಬಂದರೂ ಇವನ್ನು ಕೊಂಡುಕೊಳ್ಳುವವರೂ ಇಲ್ಲ ಎಂಬಂತಾಗಿದೆ. ಸರಕಾರ ಘೋಷಿಸಿದ ಬೆಂಬಲ ಬೆಲೆಯೂ ರೈತರ ಕೈ ಸೇರಿಲ್ಲ ಎಂದು ವರದಿಯಾಗಿದೆ. ಆದರೆ ಪ್ರಧಾನಿ ವಾಸ್ತವವನ್ನು ಮರೆಮಾಚಿ ಸುಳ್ಳು ಹೇಳುತ್ತಿದ್ದಾರೆ ಎಂದು ರಾಹುಲ್ ಹೇಳಿದ್ದಾರೆ.
ದೇಶದ ಅನ್ನದಾತರಾದ ರೈತರನ್ನು ಬೆಂಬಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ . ಭಾರತೀಯರೆಲ್ಲರೂ ರೈತರ ಹೋರಾಟವನ್ನು ಬೆಂಬಲಿಸಬೇಕು ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
Next Story