ಕಾರಾಗೃಹದಲ್ಲಿ ಗೌತಮ್ ನವ್ಲಾಖಾ ಅವರಿಗೆ ಕನ್ನಡಕ ನಿರಾಕರಣೆ: ತನಿಖೆಗೆ ಆದೇಶಿಸಿದ ಮಹಾರಾಷ್ಟ್ರದ ಗೃಹ ಸಚಿವ
ಮುಂಬೈ, ಡಿ. 9: ಎಲ್ಗಾರ್ ಪರಿಷತ್-ಮಾವೋವಾದಿ ನಂಟು ಪ್ರಕರಣದ ಆರೋಪಿಯಾಗಿರುವ ಗೌತಮ್ ನವ್ಲಾಖಾ ಅವರಿಗೆ ಕನ್ನಡಕ ಸ್ವೀಕರಿಸಲು ಅವಕಾಶ ನೀಡದ ತಲೋಜಾ ಕಾರಾಗೃಹದ ಅಧಿಕಾರಿಗಳ ವಿರುದ್ಧ ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್ಮುಖ್ ತನಿಖೆಗೆ ಆದೇಶ ನೀಡಿದ್ದಾರೆ. ದೇಶ್ಮುಖ್ ಅವರು ಟ್ವಿಟ್ಟರ್ ಮೂಲಕ ಈ ಘೋಷಣೆ ಮಾಡಿದ್ದಾರೆ.
‘‘ಭೀಮಾ-ಕೋರೆಗಾಂವ್ ಪ್ರಕರಣದ ಆರೋಪಿ ಗೌತಮ್ ನವ್ಲಾಖಾ ಅವರ ಕುಟುಂಬ ಪಾರ್ಸೆಲ್ ಒಂದನ್ನು ಕಳುಹಿಸಿತ್ತು. ಅದನ್ನು ಕಾರಾಗೃಹದ ಅಧಿಕಾರಿಗಳು ಸ್ವೀಕರಿಸಲು ನಿರಾಕರಿಸಿದ್ದರು. ಇದರಿಂದಾಗಿ ಗೌತಮ್ ನವ್ಲಾಖಾ ಕನ್ನಡಕ ಪಡೆಯಲು ಸಾಧ್ಯವಾಗಿರಲಿಲ್ಲ’’ ಎಂದು ದೇಶಮುಖ್ ಟ್ವೀಟ್ನಲ್ಲಿ ಹೇಳಿದ್ದಾರೆ.
‘‘ನಾನು ಈ ವಿಷಯದ ಬಗ್ಗೆ ತನಿಖೆಗೆ ಆದೇಶಿಸಿದ್ದೇನೆ. ಈ ಪರಿಸ್ಥಿತಿಯನ್ನು ಮಾನವೀಯವಾಗಿ ನಿರ್ವಹಿಸಬೇಕಾಗಿತ್ತು ಎಂಬುದು ನನ್ನ ಭಾವನೆ. ಇಂತಹ ಘಟನೆಗಳು ಮುಂದೆ ನಡೆಯಬಾರದು’’ ಎಂದು ಅವರು ಹೇಳಿದ್ದಾರೆ. ಕನ್ನಡಕ ಇಲ್ಲದೇ ಇದ್ದರೆ, ನವ್ಲಾಕಾಖಾ ಅವರು ಸಂಪೂರ್ಣ ಅಂಧರು. ಆದುದರಿಂದ ಈ ತಿಂಗಳ ಆರಂಭದಲ್ಲಿ ಅವರ ಕುಟುಂಬದ ಕನ್ನಡಕವೊಂದನ್ನು ಒಳಗೊಂಡ ಪಾರ್ಸೆಲ್ ಅನ್ನು ಕಳುಹಿಸಿತ್ತು. ಆದರೆ, ಕಾರಾಗೃಹದ ಅಧಿಕಾರಿಗಳು ಅದನ್ನು ಸ್ವೀಕರಿಸಲು ನಿರಾಕರಿಸಿದ್ದರು ಹಾಗೂ ಅದನ್ನು ಹಿಂದೆ ಕಳುಹಿಸಿದ್ದರು ಎಂದು ಅವರು ಪ್ರತಿಪಾದಿಸಿದ್ದಾರೆ.