ಸೋನಿಯಾ ಮಹತ್ವದ ಸಭೆ ಆರಂಭವಾಗುತ್ತಿದ್ದಂತೆಯೇ ಎನ್ಎಸ್ಯುಐ ನಾಯಕಿಯ ರಾಜೀನಾಮೆ
ಹೊಸದಿಲ್ಲಿ,ಡಿ.19: ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಶನಿವಾರ ಪಕ್ಷದ ಉನ್ನತ ನಾಯಕರ ಜತೆ ಮಹತ್ವದ ಸಭೆ ಆರಂಭಿಸಿರುವಂತೆಯೇ ಅತ್ತ ರಾಹುಲ್ ಗಾಂಧಿ ಅವರ ಆಪ್ತೆ ಹಾಗೂ ಪಕ್ಷದ ವಿದ್ಯಾರ್ಥಿ ಘಟಕವಾಗಿರುವ ಎನ್ಎಸ್ಯುಐ ರಾಷ್ಟ್ರೀಯ ಉಸ್ತುವಾರಿ ಜಂಟಿ ಕಾರ್ಯದರ್ಶಿ ರುಚಿ ಗುಪ್ತಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ರಾಹುಲ್ ಅವರೇ ರುಚಿ ಗುಪ್ತಾ ಅವರನ್ನು ಎನ್ಎಸ್ಯುಐ ಉಸ್ತುವಾರಿ ಜಂಟಿ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದರೆನ್ನಲಾಗಿದೆ. ಆದರೆ ರಾಜ್ಯ ಎನ್ಎಸ್ಯುಐ ಘಟಕಗಳನ್ನು ಇನ್ನಷ್ಟು ಬಲಗೊಳಿಸುವ ರುಚಿ ಗುಪ್ತಾ ಅವರ ಯತ್ನಗಳಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ ವೇಣುಗೋಪಾಲ್ ಅಡ್ಡಿಯುಂಟು ಮಾಡುತ್ತಿರುವುದು ರುಚಿ ಅವರಿಗೆ ಅಸಮಾಧಾನ ಮೂಡಿಸಿದೆ ಎನ್ನಲಾಗಿದೆ.
ತಮ್ಮ ರಾಜೀನಾಮೆ ಕುರಿತು ರುಚಿ ಗುಪ್ತಾ ಎನ್ಎಸ್ಯುಐ ರಾಷ್ಟ್ರೀಯ ಪದಾಧಿಕಾರಿಗಳ ವಾಟ್ಸ್ಯಾಪ್ ಗ್ರೂಪ್ನಲ್ಲಿ ಹೇಳಿಕೊಂಡಿದ್ದಾರೆ. “ಎನ್ಎಸ್ಐಯುಐ ಸಂಘಟನೆ ಬಲಪಡಿಸುವ ಯತ್ನಗಳಲ್ಲಿ ವಿಳಂಬವಾಗಿದೆ, ಪ್ರತಿಯೊಂದು ವಿಚಾರವನ್ನು ಪಕ್ಷದ ಅಧ್ಯಕ್ಷರಲ್ಲಿ ಆಗಾಗ ಹೇಳಿಕೊಳ್ಳುವುದು ಸಾಧ್ಯವಿಲ್ಲ,”' ಎಂದು ಅವರು ಬರೆದಿದ್ದಾರೆ.
ರುಚಿ ಗುಪ್ತಾ ಈ ವಿಚಾರವನ್ನು ರಾಹುಲ್ ಗಾಂಧಿ ಬಳಿ ಪ್ರಸ್ತಾಪಿಸಿದ್ದರೇ ಎಂಬುದು ತಿಳಿದಿಲ್ಲ. ಆದರೆ ಸೋನಿಯಾ ಆಪ್ತರೆಂದೇ ತಿಳಿಯಲಾದ ವೇಣುಗೋಪಾಲ್ ಅವರು ಎನ್ಎಸ್ಯುಐ ನೇಮಕಾತಿಗಳನ್ನು ವಿಳಂಬಿಸುತ್ತಿದ್ದಾರೆಂಬ ಆರೋಪವಿದೆ.