ಕೃಷಿ ಕಾನೂನು ವಿರುದ್ಧ ರೈತರ ತೀವ್ರ ಪ್ರತಿಭಟನೆ: ಗ್ರಾಮಸ್ಥರೊಂದಿಗೆ ಹರ್ಯಾಣ ಸಿಎಂ ಸಭೆ ರದ್ದು
ಹೊಸದಿಲ್ಲಿ: ಕೇಂದ್ರದ ಕೃಷಿ ವಲಯದ ಕಾನೂನುಗಳನ್ನು ವಿರೋಧಿಸಿ ರೈತರು ತೀವ್ರ ಪ್ರತಿಭಟನೆ ನಡೆಸಿದ ಕಾರಣ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಕರ್ನಾಲ್ ಜಿಲ್ಲೆಯ ಸಮೀಪದ ಹಳ್ಳಿಗೆ ಭೇಟಿ ನೀಡಿ ರೈತರೊಂದಿಗಿನ ಸಭೆಯನ್ನು ರದ್ದುಪಡಿಸಲಾಗಿದೆ.
ಕರ್ನಾಲ್ ಸಮೀಪದ ಟೋಲ್ ಪ್ಲಾಝಾದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಚದುರಿಸಲು ಹರ್ಯಾಣದ ಪೊಲೀಸರು ಅಶ್ರುವಾಯು ಹಾಗೂ ಜಲಫಿರಂಗಿ ಸಿಡಿಸಿದರು. ಸಿಎಂ ಭೇಟಿಯ ನೀಡಬೇಕಾಗಿದ್ದ ಹಳ್ಳಿಯಲ್ಲಿ ಭಾರೀ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಲಕ್ಷಣ ಕಾಣಿಸಿಕೊಂಡ ಕಾರಣ ಸಿಎಂ ಅವರು ಕೈಮ್ಲಾ ಗ್ರಾಮದಲ್ಲಿ ಭಾಗವಹಿಸಬೇಕಾಗಿದ್ದ ‘ಕಿಸಾನ್ ಮಹಾಪಂಚಾಯತ್’ ಕಾರ್ಯಕ್ರಮ ರದ್ದುಪಡಿಸಲಾಗಿದೆ. ಕೈಮ್ಲಾ ಗ್ರಾಮದಲ್ಲಿ ಪ್ರತಿಭಟನೆ ನಡೆಸಿರುವ ರೈತರು ಸಿಎಂ ಭಾಗವಹಿಸುವ ಕಾರ್ಯಕ್ರಮದ ವೇದಿಕೆಯನ್ನು ಧ್ವಂಸಗೊಳಿಸಿದ್ದಾರೆ. ರೈತರನ್ನು ಚದುರಿಸಲು ಹರ್ಯಾಣ ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ಕೈಮ್ಲಾ ಹಳ್ಳಿಯತ್ತ ಸಾಗುತ್ತಿದ್ದ ರೈತರನ್ನು ತಡೆಯಲು ಪೊಲೀಸರು ಜಲಫಿರಂಗಿಯನ್ನು ಪ್ರಯೋಗಿಸಿದ್ದಾರೆ. ರೈತರು ಕಿಸಾನ್ ಮಹಾಪಂಚಾಯತ್ ಕಾರ್ಯಕ್ರಮ ವಿರೋಧಿಸಿ ಕಪ್ಪುಬಾವುಟವನ್ನು ಪ್ರದರ್ಶಿಸಿ ಬಿಜೆಪಿ ನೇತೃತ್ವದ ಸರಕಾರದ ವಿರುದ್ಧ ಘೋಷಣೆ ಕೂಗಿದರು.
ಮುಖ್ಯಮಂತ್ರಿ ಕೈಮ್ಲಾ ಗ್ರಾಮದಲ್ಲಿ ರೈತರೊಂದಿಗೆ ಸಭೆ ನಡೆಸಿ, ಸೆಪ್ಟಂಬರ್ ನಲ್ಲಿ ಕೇಂದ್ರ ಸರಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳ ಲಾಭಗಳನ್ನು ಮನವರಿಕೆ ಮಾಡಲು ಬಯಸಿದ್ದರು.
ದಿಲ್ಲಿಯತ್ತ ತೆರಳುತ್ತಿದ್ದ ರೈತರುಗಳನ್ನು ಬ್ಯಾರಿಕೇಡ್, ಜಲಫಿರಂಗಿ, ಅಶ್ರುವಾಯು ಪ್ರಯೋಗಿಸುವ ತಡೆಯಲು ಯತ್ನಿಸುವ ಮೂಲಕ ಬಿಜೆಪಿ ಆಡಳಿತದ ಹರ್ಯಾಣ ನವೆಂಬರ್ ನಲ್ಲಿ ಹೆಚ್ಚು ಸುದ್ದಿಯಾಗಿತ್ತು.