ಗಾಂಧಿ ಹಂತಕ ನಾಥೂರಾಮ್ ಗೋಡ್ಸೆಯನ್ನು ಮತ್ತೊಮ್ಮೆ ‘ದೇಶಭಕ್ತ’ ಎಂದ ಪ್ರಜ್ಞಾ ಸಿಂಗ್
ಭೋಪಾಲ್,ಜ.13: ಮಹಾತ್ಮಾ ಗಾಂಧಿಯ ಹಂತಕ ನಾಥೂರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಪಾರ್ಲಿಮೆಂಟ್ ನಲ್ಲಿ ಸಂಬೋಧಿಸಿದ್ದ ಮಾಲೆಂಗಾವ್ ಸ್ಫೋಟ ಪ್ರಕರಣ ಪ್ರಮುಖ ಆರೋಪಿ ಹಾಗೂ ಸಂಸದೆ ಪ್ರಜ್ಞಾ ಸಿಂಗ್ ಇದೀಗ ಮತ್ತೊಮ್ಮೆ ವಿವಾದಕ್ಕೀಡಾಗಿದ್ದಾರೆ. ಮಾಧ್ಯಮಗಳನ್ನುದ್ದೇಶಿಸಿ ಮಾತನಾಡುವ ವೇಳೆ ಪ್ರಜ್ಞಾ ಸಿಂಗ್ ಗೋಡ್ಸೆಯನ್ನುದ್ದೇಶಿಸಿ ದೇಶಭಕ್ತ ಎಂದಿದ್ದು ವಿವಾದಕ್ಕೀಡಾಗಿದೆ ಎಂದು timesnownews.com ವರದಿ ಮಾಡಿದೆ.
ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್, “ಹಿಂದೂ ಮಹಾಸಭಾವನ್ನು ಸ್ಥಾಪಿಸಿದವರು ಮದನ್ ಮೋಹನ್ ಮಾಳವೀಯ. ಅವರು ಮಹಾತ್ಮಾ ಗಾಂಧಿಯ ಅನುಯಾಯಿಯಾಗಿದ್ದರು. ಮೂರು ಬಾರಿ ಆಲ್ ಇಂಡಿಯಾ ಕಾಂಗ್ರೆಸ್ ನ ಅಧ್ಯಕ್ಷರೂ ಆಗಿದ್ದರು. ಈಗ ಹಿಂದೂ ಮಹಾಸಭಾದವರು ಮಹಾತ್ಮಾ ಗಾಂಧಿಯನ್ನು ಕೊಂದ ಗೋಡ್ಸೆಯನ್ನು ಆರಾಧಿಸುತ್ತಿದ್ದಾರೆ. ಒಂದಿಷ್ಟು ನಾಚಿಕೆಪಡಿ ಎಂದು ಟ್ವೀಟ್ ಮಾಡಿದ್ದರು.
ಈ ಟ್ವೀಟ್ ಕುರಿತು ಮಾಧ್ಯಮಗಳು ಪ್ರಜ್ಞಾ ಸಿಂಗ್ ರಲ್ಲಿ ಪ್ರಶ್ನಿಸಿದಾಗ, ಕಾಂಗ್ರೆಸ್ ಪಕ್ಷವು ಯಾವತ್ತೂ ʼದೇಶಭಕ್ತʼರನ್ನು ತೆಗಳುತ್ತಲೇ ಇರುತ್ತದೆ. ಕೇಸರಿ ಭಯೋತ್ಪಾದನೆ ಎಂದೂ ಕರೆಯುತ್ತಾರೆ. ಇದಕ್ಕಿಂತಲೂ ಕೆಟ್ಟದ್ದು ಇನ್ನೇನಿದೆ? ಎಂದು ಕೇಳಿದ್ದಾಗಿ ವೀಡಿಯೋ ಸಮೇತ timesnownews.com ವರದಿ ಮಾಡಿದೆ.
ಹಿಂದೂ ಮಹಾಸಭಾ ಗೋಡ್ಸೆಯ ಕುರಿತು ಅಧ್ಯಯನಕ್ಕಾಗಿ ಗೋಡ್ಸೆ ಜ್ಞಾನ ಶಾಲೆಯನ್ನು ಆರಂಭಿಸಿತ್ತು. ವಿವಾದಗಳ ಬಳಿಕ ಇದೀಗ ಅದನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.