ಕೃಷಿ ಕಾಯ್ದೆ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಡಿ: ಅಮಿತ್ ಶಾ ಆದೇಶ
ʼಸಚಿವರು ಹೋದಲ್ಲೆಲ್ಲಾ ಹಿಂಬಾಲಿಸುತ್ತಿರುವ ರೈತರುʼ
ಚಂಡೀಗಢ,ಜ.13: ಹರ್ಯಾಣ ರಾಜ್ಯದಲ್ಲಿ ಮುಖ್ಯಮಂತ್ರಿ, ಸಚಿವರು ಹೋದಲ್ಲೆಲ್ಲಾ ಪ್ರತಿಭಟನಾ ನಿರತ ರೈತರು ಕರಿಬಾವುಟ ಹಾರಿಸುವುದು ಮತ್ತು ಯಾವುದೇ ಸಚಿವರು ಕಾರ್ಯಕ್ರಮಕ್ಕೆ ಬರದಂತೆ ತಡೆಯುವ ಕಾರ್ಯ ನಡೆಸುತ್ತಿದ್ದಾರೆ. ಕರ್ನಾಲ್ ಸಮೀಪದ ಗ್ರಾಮವೊಂದರಲ್ಲಿ ಹರ್ಯಾಣ ಮುಖ್ಯಮಂತ್ರಿ ತನ್ನ ಸಭೆಯನ್ನು ಕೂಡಾ ರದ್ದುಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಗೃಹ ಸಚಿವ ಅಮಿತ್ ಶಾ ʼಮುಂದಿನ ಆದೇಶದವರೆಗೆ ಹರ್ಯಾಣ ರಾಜ್ಯದಲ್ಲಿ ಯಾವುದೇ ಕೃಷಿ ಕಾಯ್ದೆ ಪರ ಕಾರ್ಯಕ್ರಮಗಳನ್ನು ಮಾಡಬೇಡಿ ಎಂದು ಆದೇಶ ಹೊರಡಿಸಿದ್ದಾಗಿ ndtv.com ವರದಿ ಮಾಡಿದೆ.
“ಕರ್ನಾಲ್ ನಲ್ಲಿ ಮುಖ್ಯಮಂತ್ರಿಯವರ ಭೇಟಿಗೆ ತೀವ್ರ ವಿರೋಧ ವ್ಯಕ್ತವಾಗಿ ಅದು ಅತೀರೇಕಕ್ಕೇರಿತು. ಮುಖ್ಯಮಂತ್ರಿ ತಮ್ಮ ಭೇಟಿಯನ್ನೇ ರದ್ದುಪಡಿಸಿದರು. ಈ ಕಾರಣದಿಂದಾಗಿ ಯಾವುದೇ ಕೃಷಿ ಕಾಯ್ದೆ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಡಿ ಎಂದು ಗೃಹ ಸಚಿವರು ಆದೇಶ ಹೊರಡಿಸಿದ್ದಾರೆ. ನಮಗೆ ರೈತರೊಂದಿಗಿನ ಮುಖಾಮುಖಿ ಇಷ್ಟವಿಲ್ಲ ಎಂಧು ಹರ್ಯಾಣದ ಶಿಕ್ಷಣ ಸಚಿವ ಕನ್ವರ್ ಪಾಲ್ ಗುಜ್ಜರ್ ಹೇಳಿಕೆ ನೀಡಿದ್ದಾರೆ.
“ಕಾರ್ಯಕ್ರಮದ ಸ್ಥಳದಲ್ಲಿ ರೈತರು ಹೇಗೆ ವರ್ತಿಸಿದ್ದಾರೆ ಅನ್ನುವುದನ್ನು ನಾವು ಹೇಳಬೇಕಾಗಿಲ್ಲ. ಕುರ್ಚಿಗಳನ್ನು ಎಸೆದು ವೇದಿಕೆಯನ್ನು ಹಾಳುಗೆಡವಿ, ಮುಖ್ಯಮಂತ್ರಿಗಳ ಹೆಲಿಕಾಪ್ಟರ್ ಲ್ಯಾಂಡ್ ಮಾಡಲು ಕೂಡಾ ಅನುಮತಿಸಿಲ್ಲ” ಎಂದು ಅವರು ಈ ವೇಳೆ ಆರೋಪಿಸಿದರು.