‘ಬಿಜೆಪಿಯು ಕೊರೋನಕ್ಕಿಂತಲೂ ಅಪಾಯಕಾರಿ’ ಎಂದ ಟಿಎಂಸಿ ಸಂಸದೆ ನುಸ್ರತ್ ಜಹಾನ್: ಬಿಜೆಪಿ ಆಕ್ರೋಶ
IE photo
ಕೊಲ್ಕತ್ತಾ,ಜ.16: "ಕೊರೋನಾವೈರಸ್ಗಿಂತಲೂ ಬಿಜೆಪಿ ಅಪಾಯಕಾರಿಯಾಗಿದೆ" ಎಂದು ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ನೀಡಿದ ಹೇಳಿಕೆ ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಬಿಜೆಪಿ ಐಟಿ ಘಟಕದ ಅಧ್ಯಕ್ಷ ಅಮಿತ್ ಮಾಳವೀಯ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ʼಪಶ್ಚಿಮ ಬಂಗಾಳದಲ್ಲಿ ಅತ್ಯಂತ ಕೆಟ್ಟ ರೀತಿಯ ವ್ಯಾಕ್ಸಿನ್ ರಾಜಕೀಯ ಅನಾವರಣಗೊಳ್ಳುತ್ತಿದೆʼ ಎಂದಿದ್ದಾರೆ.
"ನಿಮ್ಮ ಕಿವಿಗಳು ಹಾಗೂ ಕಣ್ಣುಗಳನ್ನು ತೆರೆದಿಡಿ, ಏಕೆಂದರೆ ನಿಮ್ಮ ಸುತ್ತಲಿರುವ ಕೆಲ ಜನರು ಕೊರೋನಾಕ್ಕಿಂತಲೂ ಅಪಾಯಕಾರಿ. ಕೊರೋನಾಕ್ಕಿಂತಲೂ ಹೆಚ್ಚು ಅಪಾಯಕಾರಿ ಏನು ಗೊತ್ತೇ? ಅದು ಬಿಜೆಪಿ" ಎಂದು ದೆಗಾಂಗ ಎಂಬಲ್ಲಿ ಸಾರ್ವಜನಿಕ ಸಭೆಯೊಂದನ್ನುದ್ದೇಶಿಸಿ ಮಾತನಾಡುತ್ತಾ ನುಸ್ರತ್ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಅಮಿತ್ ಮಾಳವೀಯ "ಪಶ್ಚಿಮ ಬಂಗಾಳದಲ್ಲಿ ಅತ್ಯಂತ ಕೆಟ್ಟ ರೀತಿಯ ವ್ಯಾಕ್ಸಿನ್ ರಾಜಕೀಯ ಅನಾವರಣಗೊಳ್ಳುತ್ತಿದೆ. ಮೊದಲು ಮಮತಾ ಬ್ಯಾನರ್ಜಿ ಸಂಪುಟದ ಸದಸ್ಯ ಸಿದ್ದೀಖುಲ್ಲಾ ಚೌಧುರಿ ಅವರು ಲಸಿಕೆ ಹೊತ್ತ ಟ್ರಕ್ಗಳನ್ನು ತಡೆದಿದ್ದರು. ಈಗ ಮುಸ್ಲಿಂ ಬಾಹುಳ್ಯದ ದೆಗಾಂಗ ಎಂಬಲ್ಲಿ ಟಿಎಂಸಿ ಸಂಸದೆ ಪ್ರಚಾರ ಕೈಗೊಂಡು ಬಿಜೆಪಿಯನ್ನು ಕೊರೋನಾಗೆ ಹೋಲಿಸಿದ್ದಾರೆ. ಆದರೆ ಪಿಶಿ ಮೌನವಾಗಿದ್ದಾರೆ. ಏಕೆ? ಓಲೈಕೆ?" ಎಂದು ಮಾಳವೀಯ ಬರೆದಿದ್ದಾರೆ.