ತನಿಖಾ ಏಜೆನ್ಸಿಗಳಿಂದ ರೈತ ಮುಖಂಡರಿಗೆ ಸಮನ್ಸ್: ಅಕಾಲಿ ದಳ ಆಕ್ರೋಶ
ಹೊಸದಿಲ್ಲಿ: ಅಮೆರಿಕ ಮೂಲದ ಖಲಿಸ್ತಾನ ಬೆಂಬಲಿತ ಸಂಘಟನೆ ಸಿಖ್ ಫಾರ್ ಜಸ್ಟಿಸ್ ಗೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ ಐಎ)ಪಂಜಾಬಿ ನಟ ದೀಪ್ ಸಿಧು ಹಾಗೂ ರೈತರ ಮುಖಂಡ ಬಲದೇವ್ ಸಿಂಗ್ ಸಹಿತ 40 ಮಂದಿಗೆ ಸಮನ್ಸ್ ನೀಡಿದೆ.
ಕೇಂದ್ರ ಸರಕಾರದ ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರುಗಳು ನಡೆಸುತ್ತಿರುವ ಪ್ರತಿಭಟನೆಗೆ ನಟ ಸಿಧು ಬೆಂಬಲಿಸುತ್ತಾ ಬಂದಿದ್ದಾರೆ. ಸಿಧುಗೆ ದಿಲ್ಲಿಯಲ್ಲಿರುವ ಮುಖ್ಯ ಕಚೇರಿಗೆ ವಿಚಾರಣೆಗೆ ಹಾಜರಾಗಲು ತಿಳಿಸಲಾಗಿದೆ. ಸರಕಾರೇತರ ಸಂಸ್ಥೆ ಖಲ್ಸಾ ಏಡ್ ಸಹಿತ ಇತರ ಅಧಿಕಾರಿಗಳಿಗೂ ಸಮನ್ಸ್ ನೀಡಲಾಗಿದೆ.
ಸಮನ್ಸ್ ಗೆ ಪ್ರತಿಕ್ರಿಯೆ ನೀಡಿರುವ ಶಿರೋಮಣಿ ಅಕಾಲಿ ದಳದ ನಾಯಕ ಸುಖ್ಬೀರ್ ಸಿಂಗ್ ಬಾದಲ್, ಕೇಂದ್ರ ಸರಕಾರವು ರೈತ ಮುಖಂಡರನ್ನು ಹಾಗೂ ಅವರ ಬೆಂಬಲಿಗರನ್ನು ಎನ್ ಐಎ ಹಾಗೂ ಈಡಿ(ಜಾರಿ ನಿರ್ದೇಶನಾಲಯದ)ವಿಚಾರಣೆಗೆ ಸಮನ್ಸ್ ನೀಡುವ ಮೂಲಕ ಬೆದರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ಕಿಸಾನ್ ಆಂದೋಲನವನ್ನು(ರೈತರ ಪ್ರತಿಭಟನೆ) ಬೆಂಬಲಿಸುತ್ತಿರುವ ರೈತ ಮುಖಂಡರು ಹಾಗೂ ಬೆಂಬಲಿಗರನ್ನು ಎನ್ ಐಎ ಹಾಗೂ ಈಡಿ ವಿಚಾರಣೆ ನಡೆಸಲು ಸಮನ್ಸ್ ನೀಡುವ ಮೂಲಕ ಅವರನ್ನು ಬೆದರಿಸಲು ಯತ್ನಿಸುತ್ತಿರುವ ಕೇಂದ್ರ ಸರಕಾರದ ನಡೆಯನ್ನು ಬಲವಾಗಿ ಖಂಡಿಸುತ್ತೇವೆ. ರೈತರನ್ನು ಬೆಂಬಲಿಸುವವರು ರೈತ ವಿರೋಧಿಗಳಲ್ಲ. 9ನೇ ಸುತ್ತಿನ ಮಾತುಕತೆ ವಿಫಲವಾದ ನಂತರ ಭಾರತ ಸರಕಾರ ರೈತರನ್ನು ಸತಾಯಿಸಲು ಪ್ರಯತ್ನಿಸುತ್ತಿದೆ ಎಂಬುದು ಇದರಿಂದ ಸ್ಪಷ್ಟವಾಗಿದೆ ಎಂದು ಬಾದಲ್ ಶನಿವಾರ ಟ್ವೀಟ್ ಮಾಡಿದ್ದಾರೆ.