ಬಿಜೆಪಿಗೆ ಮತ ಚಲಾಯಿಸುವಂತೆ ಬಿಎಸ್ಎಫ್ ಜನರನ್ನು ಬೆದರಿಸುತ್ತಿದೆ: ಟಿಎಂಸಿ ಸಚಿವ ಫಿರ್ಹಾದ್ ಹಕೀಮ್ ಆರೋಪ
ಫೋಟೊ ಕೃಪೆ: ANI
ಕೋಲ್ಕತ್ತಾ, ಜ. 21: ಪಶ್ಚಿಮಬಂಗಾಳದಲ್ಲಿ 2021ರಲ್ಲಿ ನಡೆಯಲಿರುವ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಚಲಾಯಿಸುವಂತೆ ಗಡಿ ಪ್ರದೇಶದ ಜನರಿಗೆ ಗಡಿ ಭದ್ರತಾ ಪಡೆ (ಬಿಎಸ್ಎಫ್) ಬೆದರಿಕೆ ಒಡ್ಡುತ್ತಿದೆ ಎಂದು ಪಶ್ಚಿಮಬಂಗಾಳದ ಸಚಿವ ಫಿರ್ಹಾದ್ ಹಕೀಮ್ ಗುರುವಾರ ಗಂಭೀರ ಆರೋಪ ಮಾಡಿದ್ದಾರೆ.
ಭಾರತದ ಚುನಾವಣಾ ಆಯೋಗದೊಂದಿಗಿನ ಸಭೆಯಲ್ಲಿ ಪಶ್ಚಿಮಬಂಗಾಳದ ಆಡಳಿತಾರೂಡ ತೃಣಮೂಲ ಕಾಂಗ್ರೆಸ್ ಈ ಬಗ್ಗೆ ಪ್ರಶ್ನೆ ಎತ್ತಿದೆ. ‘‘ಲಕ್ಷಾಂತರ ರೊಹಿಂಗ್ಯಾಗಳು ಮತದಾರರ ಪಟ್ಟಿಯಲ್ಲಿದ್ದಾರೆ ಎಂದು ಬಿಜೆಪಿ ಹೇಳುತ್ತಿದೆ. ಆದರೆ, ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ಸಿದ್ಧಪಡಿಸಿದೆ. ಅಂದರೆ, ಬಿಜೆಪಿ ಚುನಾವಣಾ ಆಯೋಗವನ್ನು ಟೀಕಿಸುತ್ತಿದೆ ಎಂದರ್ಥ. ಪಶ್ಚಿಮಬಂಗಾಳದಲ್ಲಿ ಕೋಮು ದ್ವೇಷ ಹರಡುತ್ತಿರುವ ಬಿಜೆಪಿಯ ಪ್ರಯತ್ನವನ್ನು ತಡೆಯುವಂತೆ ನಾವು ಚುನಾವಣಾ ಆಯೋಗವನ್ನು ಆಗ್ರಹಿಸಿದ್ದೇವೆ’’ ಎಂದು ಪಶ್ಚಿಮಬಂಗಾಳದ ತೃಣಮೂಲ ಕಾಂಗ್ರೆಸ್ನ ಸಚಿವ ಫಿರ್ಹಾದ್ ಹಕೀಮ್ ಹೇಳಿದ್ದಾರೆ.
ಅಬ್ಬಾಸ್ ಸಿದ್ದೀಕಿ, ಎಐಎಂಐಎಂ ಪಶ್ಚಿಮಬಂಗಾಳದಲ್ಲಿ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಪ್ರತಿಕ್ರಿಯಿಸಿದ ಅವರು, ಇಲ್ಲಿ ಮುಸ್ಲಿಂ ಮತದಾರರು ಮೂರ್ಖರಲ್ಲ. ಅವರಿಗೆ ಎಲ್ಲವೂ ತಿಳಿಯುತ್ತದೆ. ಯಾರೆಲ್ಲ ಮತ ವಿಭಜಕರು, ಅವರು ಬಿಹಾರದಲ್ಲಿ ಏನು ಮಾಡಿದ್ದಾರೆ ಎಂಬುದು ಅವರಿಗೆ ತಿಳಿದಿದೆ ಎಂದರು.