ಒಂದು ವೇಳೆ ಎಲ್ಲ ರೈತರೂ ಕೃಷಿ ಕಾಯ್ದೆಯನ್ನು ಅರ್ಥೈಸಿಕೊಂಡಿದ್ದರೆ ದೇಶವೇ ಹೊತ್ತಿ ಉರಿಯುತ್ತಿತ್ತು: ರಾಹುಲ್ ಗಾಂಧಿ
photo: ANI
ವಯನಾಡ್,ಜ.28: ಕೇಂದ್ರ ಸರಕಾರವು ಜಾರಿಗೆ ತಂದಿರುವ ವಿವಾದಾತ್ಮಕ ಕೃಷಿ ಕಾಯ್ದೆಯ ಕುರಿತಾದಂತೆ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸುವುದನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮುಂದುವರಿಸಿದ್ದಾರೆ. "ಒಂದು ವೇಳೆ ಭಾರತದಲ್ಲಿರುವ ಎಲ್ಲ ರೈತರೂ ಈ ಕಾಯ್ದೆಯನ್ನು ಅರ್ಥೈಸಿಕೊಂಡಿದ್ದರೆ ಇಡೀ ದೇಶವೇ ಹೊತ್ತಿ ಉರಿಯುತ್ತಿತ್ತು ಎಂದು ಹೇಳಿಕೆ ನೀಡಿದ್ದಾರೆ.
ರಾಹುಲ್ ಗಾಂಧಿ ಕೇರಳದ ವಯನಾಡ್ ಸಂಸದರಾಗಿದ್ದು, ವಯನಾಡ್ ನ ಕಲ್ಪೆಟ್ಟಾದಲ್ಲಿ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು. "ಸತ್ಯಾವಸ್ಥೆ ಏನೆಂದರೆ, ಭಾರತದಲ್ಲಿರುವ ಬಹುತೇಕ ರೈತರು ಈ ವಿವಾದಾತ್ಮಕ ಕೃಷಿ ಕಾಯ್ದೆಯನ್ನು ಸಂಪೂರ್ಣವಾಗಿ ಅರ್ಥೈಸಿಕೊಂಡಿಲ್ಲ. ಒಂದು ವೇಳೆ ಅವರೆಲ್ಲರೂ ಸಂಪೂರ್ಣವಾಗಿ ಅರ್ಥೈಸಿಕೊಂಡಿದ್ದರೆ ಈ ದೇಶವೇ ಸಂಪೂರ್ಣವಾಗಿ ಹೊತ್ತಿ ಉರಿಯುತ್ತಿತ್ತು ಎಂದು ಹೇಳಿಕೆ ನೀಡಿದ್ದಾರೆ.
ದಿಲ್ಲಿಯಲ್ಲಿ ರೈತರ ಟ್ರ್ಯಾಕ್ಟರ್ ರ್ಯಾಲಿಯ ವೇಳೆ ನಡೆದ ಹಿಂಸಾಚಾರದ ಕುರಿತು ಮಾತನಾಡಿದ ರಾಹುಲ್ ಗಾಂಧಿ. "ಯಾವುದೇ ತೊಂದರೆಗಳಿಗೆ ಹಿಂಸೆಯು ಒಂದು ಪರಿಹಾರವಲ್ಲ. ನಾನು ಈ ಹಿಂದೆಯೂ ಮನವಿ ಮಾಡಿದಂತೆ, ದಯವಿಟ್ಟು ಈ ಮೂರು ವಿವಾದಾತ್ಮಕ ಕಾಯ್ದೆಗಳನ್ನು ಹಿಂತೆಗೆಯಿರಿ ಎಂದು ಸರಕಾರಕ್ಕೆ ಮನವಿ ಮಾಡುತ್ತಿರುವುದಾಗಿ ರಾಹುಲ್ ಹೇಳಿಕೆ ನೀಡಿದ್ದಾರೆ.