ಅಸೆಂಬ್ಲಿ ಚುನಾವಣೆಯ ಬಳಿಕ ಮಮತಾ ʼಜೈಶ್ರೀರಾಮ್ʼ ಕೂಗಲೇಬೇಕು: ಅಮಿತ್ ಶಾ ಹೇಳಿಕೆ
ಕೋಲ್ಕತಾ: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಭಿವೃದ್ಧಿಯ ಮಾದರಿ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿನಾಶಕಾರಿ ಮಾದರಿ ನಡುವಿನ ಹೋರಾಟವಾಗಿದೆ. ಜೈ ಶ್ರೀರಾಮ್ ಘೋಷಣೆಯನ್ನು ನಿರಾಕರಿಸಿರುವ ಮಮತಾ ಬ್ಯಾನರ್ಜಿ ಅಸೆಂಬ್ಲಿ ಚುನಾವಣೆಯ ಬಳಿಕ ಜೈಶ್ರೀರಾಮ್ ಹೇಳಲೇಬೇಕು ಎಂದು ಉತ್ತರ ಬಂಗಾಳದ ಕೂಚ್ ಬಿಹಾರದಲ್ಲಿ ಶುಕ್ರವಾರ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಮುಂಬರುವ ರಾಜ್ಯ ಅಸೆಂಬ್ಲಿ ಚುನಾವಣೆಯಲ್ಲಿ ಅಧಿಕಾರಕ್ಕೇರುವ ಕನಸು ಕಾಣುತ್ತಿರುವ ರಾಜ್ಯ ಬಿಜೆಪಿಗೆ 294 ಸೀಟುಗಳಲ್ಲಿ 200 ಸೀಟು ಗೆಲ್ಲುವ ಗುರಿಯನ್ನು ಶಾ ನೀಡಿದ್ದಾರೆ.
ಕಳೆದ ಒಂದು ತಿಂಗಳಿಂದ ಬಿಜೆಪಿ ಚರ್ಚೆಯ ವಿಚಾರನ್ನಾಗಿಸಿರುವ ಜೈ ಶ್ರೀರಾಮ್ ಘೋಷಣೆಯನ್ನು ಇಂದು ಮತ್ತೆ ಉಲ್ಲೇಖಿಸಿದ ಶಾ, ಜೈ ಶ್ರೀರಾಮ್ ಘೋಷಣೆಯನ್ನು ಭಾರತದಲ್ಲಿ ಕೂಗದೆ ಪಾಕಿಸ್ತಾನದಲ್ಲಿ ಕೂಗಲು ಸಾಧ್ಯವೇ? ಮಮತಾ ಬ್ಯಾನರ್ಜಿ ಜೈ ಶ್ರೀರಾಮ್ ಘೋಷಣೆಯಿಂದ ಕೋಪಗೊಂಡಿದ್ದರು. ಆದರೆ, ಅವರು ಅಸೆಂಬ್ಲಿ ಚುನಾವಣೆ ಮುಗಿದ ಬಳಿಕ ಇದೇ ಘೋಷಣೆ ಮಾಡಬೇಕಾಗುತ್ತದೆ ಎಂದು ವ್ಯಂಗ್ಯವಾಡಿದರು.