ಬಿಜೆಪಿಗೆ ಸೇರ್ಪಡೆಯಾಗುವುದು ತಪ್ಪಲ್ಲ ಎಂದ ಟಿಎಂಸಿ ಬಂಡಾಯ ನಾಯಕ ದಿನೇಶ್ ತ್ರಿವೇದಿ
"ಪ್ರಧಾನಿ ಮೋದಿ ಮತ್ತು ಅಮಿತ್ ಶಾ ನನ್ನ ಸ್ನೇಹಿತರು"
ಹೊಸದಿಲ್ಲಿ: ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಂಡಾಯ ನಾಯಕನಾಗಿ ಗುರುತಿಸಿಕೊಂಡಿರುವ ದಿನೇಶ್ ತ್ರಿವೇದಿ, ನನಗೆ ಬಿಜೆಪಿ ಸೇರಲು ಆಹ್ವಾನದ ಅಗತ್ಯವಿಲ್ಲ. ಆ ಪಕ್ಷಕ್ಕೆ ಸೇರಿದರೆ ಏನೂ ತಪ್ಪಾಗದು ಎಂದು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
ದಿಲ್ಲಿಯಲ್ಲಿ ತೃಣಮೂಲ ಕಾಂಗ್ರೆಸ್ ನ ಪ್ರಮುಖರಾಗಿ ಗುರುತಿಸಿಕೊಂಡಿದ್ದ ತ್ರಿವೇದಿ ದಿಢೀರನೆ ರಾಜ್ಯಸಭೆಯ ಸದಸ್ಯ ಸ್ಥಾನವನ್ನು ತ್ಯಜಿಸಿದ್ದರು. ಬಂಗಾಳ ರಾಜ್ಯ ಸರಕಾರದ ಕಾರ್ಯವೈಖರಿಯನ್ನು ಟೀಕಿಸಿದ್ದರು. ಹೀಗಾಗಿ ಅವರು ಬಿಜೆಪಿ ಸೇರುವ ಹಾದಿಯಲ್ಲಿದ್ದಾರೆಂಬ ಕುರಿತು ವದಂತಿ ಹಬ್ಬಿತ್ತು. ಇನ್ನೆರಡು ತಿಂಗಳಲ್ಲಿ ಬಂಗಾಳದಲ್ಲಿ ವಿಧಾನಸಭಾಚುನಾವಣೆ ನಡೆಯಲಿದ್ದು, ಹಲವು ನಾಯಕರು ಟಿಎಂಸಿಯಿಂದ ಬಿಜೆಪಿಗೆ ಪಕ್ಷಾಂತರವಾಗುತ್ತಿದ್ದಾರೆ.
“ದಿನೇಶ್ ತ್ರಿವೇದಿ ಆಹ್ವಾನಕ್ಕಾಗಿ ಕಾಯುವ ಅಗತ್ಯವಿಲ್ಲ. ಅವರೆಲ್ಲರೂ ನನಗೆ ಹಳೆಯ ಸ್ನೇಹಿತರು. ಪ್ರಧಾನಮಂತ್ರಿ ನನ್ನ ಉತ್ತಮ ಗೆಳೆಯ.ಅಮಿತ್ ಭಾಯ್(ಅಮಿತ್ ಶಾ)ಹಲವು ವರ್ಷಗಳಿಂದ ಉತ್ತಮ ಗೆಳೆಯ. ನಾನು ಬಿಜೆಪಿಗೆ ಸೇರಿದರೆ ತಪ್ಪಿಲ್ಲ. ನಾಳೆಯೇ ಬಿಜೆಪಿಗೆ ಸೇರುತ್ತೇನೆ'' ಎಂದು 70ರ ವಯಸ್ಸಿನ ತ್ರಿವೇದಿ ಎನ್ ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.