ಪ.ಬಂಗಾಳ: ಕಾರಿನ ಮೇಲೆ ಬಾಂಬ್ ಎಸೆತ; ಬಿಜೆಪಿ ಮುಖಂಡ ಫಿರೋಝ್ ಕಮಲ್ ಗೆ ಗಾಯ
ಕೋಲ್ಕತಾ, ಫೆ.14: ಕೋಲ್ಕತಾಕ್ಕೆ ಪ್ರಯಾಣಿಸುತ್ತಿದ್ದ ಬಿಜೆಪಿ ಮುಖಂಡ ಫಿರೋಝ್ ಕಮಲ್ ಗಾಜಿ ಅಲಿಯಾಸ್ ಬಾಬು ಮಾಸ್ಟರ್ ಕಾರಿನ ಮೇಲೆ ಕಚ್ಛಾಬಾಂಬ್ ಎಸೆದ ಘಟನೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ನಡೆದಿದ್ದು ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
ಬಸಂತಿ ಹೆದ್ದಾರಿಯಲ್ಲಿ ಶನಿವಾರ ಘಟನೆ ನಡೆದಿದೆ. ತೃಣಮೂಲ ಕಾಂಗ್ರೆಸ್ಗೆ ರಾಜೀನಾಮೆ ನೀಡಿ ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದ ಬಾಬು ಮಾಸ್ಟರ್ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಅಪರಿಚತ ವ್ಯಕ್ತಿಗಳು ನಡೆಸಿದ ಕಚ್ಚಾಬಾಂಬ್ ದಾಳಿಯಿಂದ ಅವರು ಹಾಗೂ ಕಾರಿನ ಚಾಲಕ ಗಾಯಗೊಂಡಿದ್ದು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಹಿರಿಯ ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ‘ಟಿಎಂಸಿಯ ಕ್ರಿಮಿನಲ್ ಶಕ್ತಿಗಳು ಬಾಬು ಮಾಸ್ಟರ್ ಮೇಲೆ ಆಕ್ರಮಣ ನಡೆಸಿವೆ’ ಎಂದು ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಹಿರಿಯ ಟಿಎಂಸಿ ಮುಖಂಡ , ರಾಜ್ಯದ ಸಚಿವ ಜ್ಯೋತಿಪ್ರಿಯ ಮಲಿಕ್ ನಿರಾಕರಿಸಿದ್ದಾರೆ.