ಪೆಟ್ರೋಲ್, ಡೀಸೆಲ್ ದರ ಇಳಿಸಿ, ರಾಜಧರ್ಮವನ್ನು ಪಾಲಿಸಿ: ಪ್ರಧಾನಿ ಮೋದಿಗೆ ಸೋನಿಯಾ ಪತ್ರ
"ಜನರ ದುಃಖ ಮತ್ತು ಸಂಕಟಗಳಿಂದ ಸರಕಾರ ಲಾಭ ಗಳಿಸುತ್ತಿದೆ"
ನವದೆಹಲಿ: ಇಂಧನ ಬೆಲೆ ಕಡಿತಗೊಳಿಸುವಂತೆ ಕಾಂಗ್ರೆಸ್ ಹಂಗಾಮಿ ಮುಖ್ಯಸ್ಥೆ ಸೋನಿಯಾ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರನ್ನು ಪತ್ರದ ಮೂಲಕ ಒತ್ತಾಯಿಸಿದ್ದಾರೆ. ಅಂತರರಾಷ್ಟ್ರೀಯ ಕಚ್ಚಾ ಬೆಲೆಗಳು ಏರುಮುಖವಾಗಿ ಸಾಗುತ್ತಿರುವ ಸಂದರ್ಭಗಳಲ್ಲಿಯೂ ಸರ್ಕಾರವು 'ಜನರ ದುಃಖ ಮತ್ತು ಸಂಕಟ'ಗಳಿಂದ ಲಾಭ ಗಳಿಸುತ್ತಿದೆ ಎಂದು ಅವರು ಪತ್ರದಲ್ಲಿ ಆರೋಪಿಸಿದ್ದಾರೆ.
"ಕಚ್ಚಾ ತೈಲದ ಬೆಲೆಯು ಯುಪಿಎ ಸರ್ಕಾರದ ಅವಧಿಯಲ್ಲಿ ಇದ್ದದ್ದಕ್ಕಿಂತ ಅರ್ಧದಷ್ಟಿದೆ. ಆದ್ದರಿಂದ, ನಿಮ್ಮ ಸರ್ಕಾರದ ಬೆಲೆಗಳನ್ನು ಹೆಚ್ಚಿಸುವ ಕ್ರಿಯೆ (ನಿರಂತರವಾಗಿ ಫೆಬ್ರವರಿ 20 ರವರೆಗೆ 12 ದಿನಗಳವರೆಗೆ) ಲಾಭದಾಯಕವಾದ ಒಂದು ಲಜ್ಜೆಗೆಟ್ಟ ಕೃತ್ಯಕ್ಕಿಂತ ಸ್ವಲ್ಪ ಕಡಿಮೆಯಷ್ಟೇ" ಎಂದು ಸೋನಿಯಾ ಬರೆದಿದ್ದಾರೆ.
ಕೆಲವು ಸ್ಥಳಗಳಲ್ಲಿ ಪೆಟ್ರೋಲ್ ಲೀಟರ್ ಗೆ 100 ರೂ. ತಲುಪಿದ ಸಂದರ್ಭದಲ್ಲಿ ಸೋನಿಯಾ ಗಾಂಧಿ ಈ ಪತ್ರ ಬರೆದಿದ್ದಾರೆ. ಬೆಲೆಗಳು ಕಡಿಮೆಯಾದಾಗ ಅದರ ಪ್ರಯೋಜನಗಳನ್ನು ಸಾಮಾನ್ಯ ಜನರಿಗೆ ತಲುಪಿಸಲಾಗಿಲ್ಲ ಎಂಬ ಅಂಶದ ಕುರಿತು ಅವರು ಗಮನ ಸೆಳೆದರು.
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಹೆಚ್ಚಿನ ಸುಂಕವನ್ನು "ಆರ್ಥಿಕ ದುರುಪಯೋಗವನ್ನು ಮುಚ್ಚಿಹಾಕಲು ಮಾಡುತ್ತಿರುವ ಸುಲಿಗೆ" ಎಂದು ಅವರು ವಾಗ್ದಾಳಿ ನಡೆಸಿದರು.
"ಸತ್ಯಾವಸ್ಥೆ ಏನೆಂದರೆ ಜಿಡಿಪಿ ಮುಳುಗುತ್ತಿದ್ದಂತೆ, ಅನಿಲ, ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳು ಪರಿಶೀಲನೆಯಿಲ್ಲದೇ ಏರುತ್ತಲೇ ಇವೆ" ಎಂದು ಅವರು ಬರೆದಿದ್ದಾರೆ. ದೇಶೀಯ ಕಚ್ಚಾ ತೈಲ ಉತ್ಪಾದನೆಯು 18 ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ ಎಂದೂ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮಧ್ಯಮ ಮತ್ತು ಸಂಬಳಕ್ಕಾಗಿ ದುಡಿಯುವ ವರ್ಗ, ರೈತರು ಮತ್ತು ಬಡವರು ಆರ್ಥಿಕ ಕುಸಿತವನ್ನು ಅನುಭವಿಸುತ್ತಿದ್ದಾರೆ. ವ್ಯಾಪಕ ನಿರುದ್ಯೋಗ, ವೇತನ ಕಡಿತ, ಉದ್ಯೋಗ ನಷ್ಟ, ಹೆಚ್ಚಿನ ಬೆಲೆಗಳು ಮತ್ತು ಆದಾಯದ ಸವೆತವನ್ನು ಎದುರಿಸುತ್ತಿದ್ದಾರೆ ಎಂದು ಗಾಂಧಿ ತಮ್ಮ ಪತ್ರದಲ್ಲಿ ಬರೆದಿದ್ದಾರೆ.
"ವಿರೋಧ ಪಕ್ಷದ ಪ್ರಮುಖ ಪಕ್ಷವಾಗಿ, ನಾನು ʼರಾಜಧರ್ಮʼವನ್ನು ಅನುಸರಿಸಲು ಮತ್ತು ಅಬಕಾರಿ ಸುಂಕವನ್ನು ಭಾಗಶಃ ಹಿಂತೆಗೆದುಕೊಳ್ಳುವ ಮೂಲಕ ಇಂಧನ ಬೆಲೆಯನ್ನು ಕಡಿಮೆ ಮಾಡಲು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ" ಎಂದು ಅವರು ಬರೆದಿದ್ದಾರೆ.