ಬಿಜೆಪಿ ರ್ಯಾಲಿಯಲ್ಲಿ ಕಾಂಗ್ರೆಸ್ ನಾಯಕ ಕಾಮರಾಜನ್ ಕಟೌಟ್; ಕಾಂಗ್ರೆಸ್ನಿಂದ ತೀವ್ರ ವಾಗ್ದಾಳಿ
ಚೆನ್ನೈ, ಫೆ. 26: ಬಿಜೆಪಿ ಕಾರ್ಯಕ್ರಮದ ವೀಡಿಯೊದಲ್ಲಿ ಎಡಿಎಂಕೆ ಸ್ಥಾಪಕ ಎಂ.ಜಿ. ರಾಮಚಂದ್ರನ್ ಅವರ ಭಾವಚಿತ್ರ ಬಳಸಿರುವುದಕ್ಕೆ ಎಡಿಎಂಕೆಯಿಂದ ಎರಡು ತಿಂಗಳ ಹಿಂದೆ ಟೀಕೆಗೆ ಗುರಿಯಾಗಿದ್ದ ತಮಿಳುನಾಡು ಬಿಜೆಪಿ ಘಟಕ ಗುರುವಾರ ಇಂತದ್ದೇ ಕಾರಣಕ್ಕೆ ಕಾಂಗ್ರೆಸ್ನ ಆಕ್ರೋಶಕ್ಕೆ ಗುರಿಯಾಗಿದೆ.
ಕೋಯಂಬತ್ತೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿ ನಡೆದ ಸ್ಥಳದಲ್ಲಿ ಎಂಜಿಆರ್ ಅಲ್ಲದೆ, ಕಾಂಗ್ರೆಸ್ನ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಕೆ. ಕಾಮರಾಜ್ ಅವರ ಬೃಹತ್ ಕಟೌಟ್ ಹಾಕಿರುವುದನ್ನು ಕಾಂಗ್ರೆಸ್ ಖಂಡಿಸಿದೆ.
ಆರೆಸ್ಸೆಸ್ ಈ ಹಿಂದೆ ಕಾಮರಾಜ್ ಅವರ ಮೇಲೆ ದಾಳಿ ನಡೆಸಲು ಯತ್ನಿಸಿತ್ತು. ಈಗ ಅವರ ಕಟೌಟ್ ಹಾಕಿರುವುದಕ್ಕೆ ನಾಚಿಕೆಯಾಗಬೇಕು ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಕಾಂಗ್ರೆಸ್ ನಾಯಕ ಕಾಮರಾಜನ್ ಅವರ ಫೋಟೊ ಬಳಸಲು ಬಿಜೆಪಿ ಹಾಗೂ ಆರೆಸ್ಸೆಸ್ ಗೆ ಯಾವುದೇ ಅಧಿಕಾರ ಇಲ್ಲ. ಈ ಹಿಂದೆ ಆರೆಸ್ಸೆಸ್ ಕಾಮರಾಜನ್ ಅವರ ಮೇಲೆ ದಾಳಿ ನಡೆಸಲು ಪ್ರಯತ್ನಿಸಿತ್ತು. ಈಗ ಅವರ ಫೋಟೊವನ್ನು ಪ್ರಚಾರಕ್ಕೆ ಬಳಸುತ್ತಿರುವುದು ನಾಚಿಕೆಗೇಡಿನ ವಿಚಾರ ಎಂದು ಕಾಂಗ್ರೆಸ್ ನಾಯಕ ಎಳಂಗೋವನ್ ಹೇಳಿದ್ದಾರೆ.