ಉತ್ತರಪ್ರದೇಶ: ಅಂತ್ಯ ಕಾಣದ ಅಂತರ್ ಧರ್ಮೀಯ ಜೋಡಿಯ ವಿವಾಹ ಪ್ರಕರಣ
ಬರೇಲಿ (ಉತ್ತರಪ್ರದೇಶ), ಮಾ. 1: ನಾಲ್ಕು ತಿಂಗಳ ಹಿಂದೆ 27 ವರ್ಷದ ಮುಸ್ಲಿಂ ಯುವಕ ಹಾಗೂ ಇನ್ನೊಂದು ಧರ್ಮಕ್ಕೆ ಸೇರಿದ ಯುವತಿ ವಿವಾಹವಾಗುವ ಉದ್ದೇಶದಿಂದ ಪರಾರಿಯಾಗಿದ್ದರು. ಈ ಘಟನೆ ಇಲ್ಲಿ ಉದ್ವಿಗ್ನತೆ ಸೃಷ್ಟಿಸಿತ್ತು. ಅನಂತರ ಯುವಕನ್ನು ಬಂಧಿಸಿ ಜೈಲಿಗೆ ಹಾಕಲಾಗಿತ್ತು. ಈ ಜೋಡಿಗಳು ಈಗ ಕಾನೂನುಬದ್ದವಾಗಿ ವಿವಾಹವಾಗಲು ಉಪ ವಿಭಾಗೀಯ ದಂಡಾಧಿಕಾರಿ ಅವರ ಅನುಮತಿಗಾಗಿ ಕಾಯುತ್ತಿದ್ದಾರೆ.
ಆದರೆ, ಇನ್ನೊಂದು ತಿಂಗಳು ಕಾಯುವಂತೆ ಉಪವಿಭಾಗೀಯ ದಂಡಾಧಿಕಾರಿ ಅವರಿಗೆ ಸೂಚಿಸಿದ್ದಾರೆ. ವಿವಾಹವಾಗಲು ಸ್ವಾತಂತ್ರ್ಯ ಹಾಗೂ ವಿವಾಹ ನೋಂದಣಾಧಿಕಾರಿಯಿಂದ ವಿಶೇಷ ಸಂದರ್ಭದ ಅಡಿಯಲ್ಲಿ ನೋಟಿಸ್ ಅವಧಿಗೆ ವಿನಾಯತಿ ನೀಡಿದ ಅಲಹಾಬಾದ್ ಉಚ್ಚ ನಾಯಾಲಯದ ಆದೇಶ ಜೋಡಿ ಕೈಯಲ್ಲಿ ಇದೆ. ಆದರೆ, ಸದಾರ್ ಪ್ರದೇಶದ ಎಸ್ಡಿಎಂ ವಿಷ್ಣು ರಾಜ್, ‘‘ಕಾನೂನು ಜೋಡಿಗಳಿಗೆ ಅನುಕೂಲವಾಗಿ ಇದೆ. ಆದರೆ, ಕಾನೂನು ಸುವ್ಯವಸ್ಥೆಯ ಯಾವುದೇ ಸಮಸ್ಯೆ ಇಲ್ಲ ಎಂಬ ಬಗ್ಗೆ ಪೊಲೀಸರ ವರದಿಗಾಗಿ ಕಾಯುತ್ತಿದ್ದೇವೆ. ಜೋಡಿಗಳು ತಮ್ಮ ಗೆಳೆಯರೊಂದಿಗೆ ಶನಿವಾರ ಆಗಮಿಸಿದ್ದರು. ಗೆಳೆಯರು ಸಾಕ್ಷಿಯಾಗಲು ಒಪ್ಪಿಕೊಂಡಿದ್ದಾರೆ. ಆದರೆ, ಯುವತಿಯ ಕುಟುಂಬ ಈ ವಿವಾಹವನ್ನು ಈಗಲೂ ವಿರೋಧಿಸುತ್ತಿದೆ’’ ಎಂದಿದ್ದಾರೆ.
ವಿಶೇಷ ಕಾಯ್ದೆ ಅಡಿಯಲ್ಲಿ ವಿವಾಹಕ್ಕೆ ಅರ್ಜಿ ಸಲ್ಲಿಸಲು ಜೋಡಿಗಳು ವೈಯುಕ್ತಿಕವಾಗಿ ಹಾಗೂ ತಮ್ಮ ವಕೀಲರೊಂದಿಗೆ ಹಾಜರಾಗಿದ್ದಾರೆ. ಅವರು ಅಲಹಾಬಾದ್ ಉಚ್ಚ ನ್ಯಾಯಾಲಯದ ಆದೇಶವನ್ನು ಕೂಡ ಸಲ್ಲಿಸಿದ್ದಾರೆ ಅವರು ಹೇಳಿದ್ದಾರೆ. ಪೊಲೀಸರು ವರದಿ ಸಲ್ಲಿಸಿದ ಕೂಡಲೇ ಪ್ರಕ್ರಿಯೆಗಳು 30 ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಅನಂತರ ಜೋಡಿಗೆ ವಿವಾಹವಾಗಲು ಅನುಮತಿ ನೀಡಲಾಗುವುದು ಎಂದು ವಿಷ್ಣು ರಾಜ್ ತಿಳಿಸಿದ್ದಾರೆ.