ಜನರಿಗೆ ನ್ಯಾಯ ನೀಡಲು ಸಾಧ್ಯವಾಗದ ಬಿಜೆಪಿಗೆ ‘ಭಾರತ್ ಮಾತಾ ಕಿ ಜೈ’ಘೋಷಣೆ ಕೂಗುವ ಹಕ್ಕಿಲ್ಲ: ಉದ್ಧವ್ ಠಾಕ್ರೆ
‘ಸದ್ಯ ಸೈಕಲ್ ಬೆಲೆ ಏರಿಸದ್ದಕ್ಕೆ ಧನ್ಯವಾದ’ ಎಂದು ವ್ಯಂಗ್ಯವಾಡಿದ ಮಹಾರಾಷ್ಟ್ರ ಸಿಎಂ
ಮುಂಬೈ: ಬಿಜೆಪಿ ವಿರುದ್ಧ ಬುಧವಾರ ತೀವ್ರ ವಾಗ್ದಾಳಿ ನಡೆಸಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ದೇಶವಾಗಲಿ ಅಥವಾ ಮಹಾರಾಷ್ಟ್ರವಾಗಲಿ ಬಿಜೆಪಿಯ “ಖಾಸಗಿ ಆಸ್ತಿಯಲ್ಲ’’. ದೇಶದ ಸಾಮಾನ್ಯ ಜನರಿಗೆ ನ್ಯಾಯ ಒದಗಿಸಲು ಸಾಧ್ಯವಾಗದ ಬಿಜೆಪಿಗೆ ‘ಭಾರತ್ ಮಾತಾ ಕಿ ಜೈ’ಘೋಷಣೆ ಕೂಗುವ ಹಕ್ಕಿಲ್ಲ ಎಂದು ಹರಿಹಾಯ್ದರು.
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಾತನಾಡಿದ ಠಾಕ್ರೆ, "ಬಿಜೆಪಿಯ ಮಾತೃಸಂಸ್ಥೆ(ಆರ್ ಎಸ್ ಎಸ್)ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ ಹಾಗೂ ಭಾರತ್ ಮಾತಾ ಕಿ ಜೈ ಎಂದು ಜಪಿಸುವ ಹಕ್ಕನ್ನು ಅದು ಹೊಂದಿಲ್ಲ. ನಿಮಗೆ(ಬಿಜೆಪಿ) ಸಾಮಾನ್ಯ ಜನರಿಗೆ ನ್ಯಾಯ ಒದಗಿಸಲು ಸಾಧ್ಯವಾಗದಿದ್ದರೆ ‘ಭಾರತ್ ಮಾತಾ ಕಿ ಜೈ’ಎಂದು ಜಪಿಸಲು ನಿಮಗೆ ಹಕ್ಕಿಲ್ಲ’’ ಎಂದು ಹೇಳಿದರು.
"ಪೆಟ್ರೋಲ್ ಪ್ರತಿ ಲೀಟರ್ ದರ ನೂರು ರೂಪಾಯಿ ತಲುಪಿದ್ದು, ಗ್ಯಾಸ್ ಸಿಲಿಂಡರ್ ಗಳು ಸಾವಿರ ರೂಪಾಯಿಗಳತ್ತ ಸಾಗುತ್ತಿವೆ. ಕಡೇ ಪಕ್ಷ ಅವರು ಸೈಕಲ್ ದರವನ್ನು ಹೆಚ್ಚಿಸಿಲ್ಲ. ಅದಕ್ಕೆ ಧನ್ಯವಾದಗಳು'' ಎಂದು ಮಹಾರಾಷ್ಟ್ರ ಸಿಎಂ ಅವರ ಗಗನಕ್ಕೇರುತ್ತಿರುವ ಇಂಧನ ಹಾಗೂ ಅಡುಗೆ ಅನಿಲದ ದರದ ಕುರಿತಾಗಿ ಕೇಂದ್ರ ಸರಕಾರವನ್ನು ಮೂದಲಿಸಿದರು.