ಬಿಜೆಪಿ ಸಂಸದನ ಪುತ್ರನ ಮೇಲೆ ಗುಂಡಿನ ದಾಳಿ ನಾಟಕ: ಪೊಲೀಸ್
ಸಾಂದರ್ಭಿಕ ಚಿತ್ರ
ಲಕ್ನೋ, ಮಾ. 3: ಲಕ್ನೋದಲ್ಲಿ ಬುಧವಾರ ತನ್ನ ಮೇಲೆ ಗುಂಡು ಹಾರಿಸಲಾಯಿತು ಎಂದು ಬಿಜೆಪಿ ಸಂಸದ ಕೌಶಲ್ ಕಿಶೋರ್ ಅವರ ಪುತ್ರ ಆರೋಪಿಸಿದ ಬಳಿಕ, ಪೊಲೀಸರು ಇದು ಅವರು ಆಡಿದ ನಾಟಕ ಎಂದು ಪ್ರತಿಪಾದಿಸಿದ್ದಾರೆ.
ಮೋಹನ್ಲಾಲ್ಗಂಜ್ ಕ್ಷೇತ್ರದ ಬಿಜೆಪಿ ಸಂಸದನ ಪುತ್ರ ಆಯುಷ್ (30)ನ ಮೇಲೆ ಮೇಡಿಯನ್ನಲ್ಲಿ ಬುಧವಾರ ಬೆಳಗ್ಗೆ 2 ಗಂಟೆಗೆ ಗುಂಡು ಹಾರಿಸಲಾಗಿತ್ತು. ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಪ್ರಥಮ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿತ್ತು.
ತನ್ನ ಮೇಲೆ ಭಾವ ಗುಂಡು ಹಾರಿಸುವಂತೆ ಆಯುಷ್ ನಾಟಕವಾಡಿದ್ದಾನೆ ಎಂದು ಇದುವರೆಗಿನ ತನಿಖೆಯಿಂದ ತಿಳಿದುಬಂದಿದೆ ಎಂದು ಲಕ್ನೋದ ಪೊಲೀಸ್ ಆಯುಕ್ತ ಡಿ.ಕೆ. ಠಾಕೂರ್ ಹೇಳಿದ್ದಾರೆ. ಯಾರೊಬ್ಬರೂ ದೂರು ದಾಖಲಿಸಿಲ್ಲ. ಈ ಘಟನೆಯಲ್ಲಿ ಬಳಸಲಾದ ಪಿಸ್ತೂಲು ಪತ್ತೆಯಾಗಿರುವುದರಿಂದ ನಾವೇ ಎಫ್ಐಆರ್ ದಾಖಲಿಸಲಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story