"ಅವರು ನನ್ನನ್ನು ನಿರ್ದಯವಾಗಿ ಥಳಿಸಿದರು, ಎಡಗಾಲಿನ ಮೂಳೆಗಳು ಮುರಿದು ಮಂಡಿಯವರೆಗೆ ಪ್ಲಾಸ್ಟರ್ ಹಾಕಲಾಗಿದೆ"
ಪೊಲೀಸ್ ದೌರ್ಜನ್ಯದ ಕಥೆ ಬಿಚ್ಚಿಟ್ಟ ದಲಿತ ಕಾರ್ಮಿಕ ಕಾರ್ಯಕರ್ತ ಶಿವಕುಮಾರ್
photo: thewire.in
ಚಂಡಿಗಡ,ಮಾ.6: ಕುಂಡ್ಲಿ ಕೈಗಾರಿಕಾ ಪ್ರದೇಶದಲ್ಲಿ ದುಡಿಯುತ್ತಿರುವ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡುತ್ತಿರುವ ದಲಿತ ಕಾರ್ಯಕರ್ತ ಶಿವಕುಮಾರ್ (24) ಮಾ.3ರಂದು ಸೋನೆಪತ್ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ. ಜೈಲಿನಲ್ಲಿದ್ದಾಗ ಪೊಲೀಸರು ತನ್ನ ಮೇಲೆ ನಡೆಸಿದ ದೌರ್ಜನ್ಯಗಳನ್ನು ಮರೆಯಲು ಅವರಿಗೆ ಸಾಧ್ಯವಾಗುತ್ತಿಲ್ಲ.
ಕಳೆದ ತಿಂಗಳು ಪಂಜಾಬ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಲಾದ ಶಿವಕುಮಾರ್ ರ ಸಂಪೂರ್ಣ ವೈದ್ಯಕೀಯ ತಪಾಸಣೆಯ ವರದಿಯು ಹರ್ಯಾಣ ಪೊಲೀಸರು ಅವರಿಗೆ ನೀಡಿದ್ದ ಭಾರೀ ಚಿತ್ರಹಿಂಸೆಯನ್ನು ಬಯಲುಗೊಳಿಸಿತ್ತು. ಬಿಡುಗಡೆಯ ಮರುದಿನ,ಅಂದರೆ ಮಾ.4ರಂದು ಚಂಡಿಗಡದ ಪೋಸ್ಟ್ ಗ್ರಾಜ್ಯುಯೇಟ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜ್ಯುಕೇಷನ್ ಆ್ಯಂಡ್ ರೀಸರ್ಚ್ಗೆ ಭೇಟಿ ನೀಡಿದ ಅವರು ಮತ್ತೊಮ್ಮೆ ಸಂಪೂರ್ಣ ವೈದ್ಯಕೀಯ ಪರೀಕ್ಷೆಗೊಳಗಾಗಿದ್ದಾರೆ.
ಮಾ.5ರಂದು ಪಂಜಾಬ್ ವಿವಿಯ ಕ್ಯಾಂಪಸ್ ನಲ್ಲಿ ತನ್ನನ್ನು ಭೇಟಿಯಾಗಿದ್ದ ಸುದ್ದಿಗಾರರ ಬಳಿ ತನ್ನ ಬಂಧನ ಮತ್ತು ಜೈಲಿನಲ್ಲಿ ತನಗೆ ನೀಡಲಾಗಿದ್ದ ಚಿತ್ರಹಿಂಸೆಯ ಕುರಿತು ಹೇಳಿಕೊಂಡಿದ್ದಾರೆ. ಅವರ ಎಡಗಾಲಿನ ಮೂಳೆಗಳು ಮುರಿದಿದ್ದು,ಮಂಡಿಯವರೆಗೆ ಪ್ಲಾಸ್ಟರ್ ಹಾಕಲಾಗಿದೆ.
ಜ.16ರಂದು ದಿಲ್ಲಿಯ ಸಿಂಘು ಗಡಿಯಲ್ಲಿ ರೈತರ ಪ್ರತಿಭಟನೆ ನಡೆಯುತ್ತಿರುವ ಸ್ಥಳದ ಸಮೀಪದಲ್ಲಿರುವ ಕೆಎಫ್ಸಿ ಮಾಲ್ ಬಳಿಯಿಂದ ಕೆಲವರು ಶಿವಕುಮಾರ್ ರನ್ನು ಅಪಹರಿಸಿದ್ದರು. ಅಜ್ಞಾತ ಸ್ಥಳಕ್ಕೆ ಕರೆದೊಯ್ದು ನಿರ್ದಯವಾಗಿ ಥಳಿಸಿದ್ದರು. ಎರಡು ಗಂಟೆಗಳ ನಂತರವೇ ತನ್ನನ್ನು ಹರ್ಯಾಣ ಪೊಲೀಸರು ಬಂಧಿಸಿದ್ದಾರೆ ಎನ್ನುವುದು ಅವರಿಗೆ ಗೊತ್ತಾಗಿತ್ತು.
ಕಾರ್ಮಿಕರ ಹಕ್ಕುಗಳ ಬಗ್ಗೆ ಮಾತನಾಡಿದ್ದಕ್ಕಾಗಿ ಮತ್ತು ಅವರ ವೇತನಬಾಕಿಯ ಪಾವತಿಗೆ ಆಗ್ರಹಿಸಿದ್ದಕ್ಕಾಗಿ ಪೊಲೀಸರು ತನ್ನನ್ನು ಬಂಧಿಸಿದ್ದರು. ಆದರೆ ಪೊಲೀಸರು ಮತ್ತು ಕೈಗಾರಿಕೆಗಳನ್ನು ಕೆರಳಿಸುವಂತಹ ಒಂದೇ ಒಂದು ಮಾತನ್ನು ತಾನು ಆಡಿರಲಿಲ್ಲ. ಜ.12ರಂದು ಕುಂಡ್ಲಿ ಕೈಗಾರಿಕಾ ಪ್ರದೇಶದಲ್ಲಿ ಪೊಲೀಸರು ಮತ್ತು ಕಾರ್ಮಿಕರ ನಡುವೆ ಘರ್ಷಣೆಗಳು ನಡೆದಿದ್ದಾಗ ತಾನು ಆ ಸ್ಥಳದಲ್ಲಿಯೇ ಇರಲಿಲ್ಲ. ಆದರೂ ಪೊಲೀಸರು ತನ್ನನ್ನು ಬಂಧಿಸಿದ್ದರು ಎಂದು ಶಿವಕುಮಾರ್ ತಿಳಿಸಿದರು.
‘ಕುಂಡ್ಲಿ ಕೈಗಾರಿಕಾ ಸಂಘ(ಕೆಐಎ)ವು ಕಾರ್ಮಿಕರು ಯೂನಿಯನ್ ರಚಿಸಿಕೊಳ್ಳುವುದನ್ನು ಬಯಸುತ್ತಿಲ್ಲ. ನಾವೆಲ್ಲ ಸಂವಿಧಾನವನ್ನು ಓದಿದ್ದೇವೆ,ಆದರೆ ಅದು ನಮಗೆ ನೀಡಿರುವ ಹಕ್ಕುಗಳನ್ನು ಚಲಾಯಿಸಲು ನಮಗೆ ಸಾಧ್ಯವಾಗುತ್ತಿಲ್ಲ ಎಂದ ಶಿವಕುಮಾರ್, ಕಾರ್ಮಿಕರನ್ನು ದಮನಿಸಲು ಕುಂಡ್ಲಿ ಠಾಣಾಧಿಕಾರಿ ಮತ್ತು ಕೆಐಎ ಮುಖ್ಯಸ್ಥರು ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.
‘2018ರಲ್ಲಿ ನಾನು ಮತ್ತು ಸಂಗಡಿಗರು ಮಝ್ದೂರ್ ಅಧಿಕಾರ ಸಂಘಟನೆಯನ್ನು ಸ್ಥಾಪಿಸಿದ್ದು,ಆಗ ಕಾರ್ಮಿಕರು ಕಾರ್ಮಿಕ ದಿನವನ್ನು ಆಚರಿಸಿದ್ದರು. ಆಗಲೂ ಇದನ್ನೆಲ್ಲ ಮಾಡದಂತೆ ನಮಗೆ ಅವರು ಸೂಚಿಸಿದ್ದರು. ನಾವು ಒಗ್ಗೂಡುವುದನ್ನು ಅವರು ಬಯಸಿಲ್ಲ ಎನ್ನುವುದು ಸ್ಪಷ್ಟವಾಗಿದೆ’ ಎಂದರು.
ಪೊಲೀಸರು ಜೈಲಿನಲ್ಲಿ ತನ್ನ ವಿರುದ್ಧ ಜಾತಿನಿಂದನೆ ಮಾಡಿದ್ದರು. ಭಾರತೀಯ ಜೈಲುಗಳಲ್ಲಿ ಜಾತಿ ತಾರತಮ್ಯ ಹೆಚ್ಚಿನ ಪ್ರಮಾಣದಲ್ಲಿದೆ ಎಂದ ಶಿವಕುಮಾರ,ಪೊಲೀಸರು ಪ್ರತಿದಿನ ಕನಿಷ್ಠ ಮೂರು ಗಂಟೆ ಕಾಲ ತನಗೆ ಚಿತ್ರಹಿಂಸೆ ನೀಡುತ್ತಿದ್ದರು. ಮೊದಲ 3-4 ದಿನ ಅವರು ತನಗೆ ನಿದ್ರಿಸಲೂ ಬಿಟ್ಟಿರಲಿಲ್ಲ. ಪೊಲೀಸರು ತನ್ನ ಎಡಪಾದದ ಹೆಬ್ಬೆರಳಿನ ಉಗುರನ್ನು ಕೀಳಲೂ ಪ್ರಯತ್ನಿಸಿದ್ದರು ಎಂದು ನೆನಪಿಸಿಕೊಂಡರು.
ಇದೀಗ ಮತ್ತೆ ಪ್ರತಿಭಟನೆಗೆ ಸೇರಲು ಸಜ್ಜಾಗಿರುವ ಶಿಶಿವಕುಮಾರ್,ತನ್ನ ಬಂಧನಕ್ಕೆ ಮುನ್ನ ತಾನು ರೈತರು ಮತ್ತು ಕಾರ್ಮಿಕರ ಏಕತೆಗೆ ಪ್ರಯತ್ನಿಸಿ ಯಶಸ್ವಿಯಾಗಿದ್ದೆ,ಈಗಲೂ ಆ ಕಾರ್ಯವನ್ನು ಮಾಡಬೇಕಿದೆ ಎಂದು ಒತ್ತಿ ಹೇಳಿದರು. ತನ್ನ ಕೆಲಸ ಹೋದರೂ ಪರವಾಗಿಲ್ಲ,ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡುವುದನ್ನು ತಾನು ನಿಲ್ಲಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಕೃಪೆ: thewire.in