ಮತ್ತೊಮ್ಮೆ ಟಿಎಂಸಿ ಅಧಿಕಾರಕ್ಕೆ ಬಂದರೆ ಪಶ್ಚಿಮ ಬಂಗಾಳ ಕಾಶ್ಮೀರವಾಗುತ್ತದೆ: ಸುವೇಂದು ಅಧಿಕಾರಿ
"ಮಮತಾ ಬ್ಯಾನರ್ಜಿಯನ್ನು 50,000 ಮತಗಳ ಅಂತರದಿಂದ ಸೋಲಿಸುತ್ತೇನೆ"
ಕೋಲ್ಕತಾ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮ ಕ್ಷೇತ್ರದಿಂದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಸ್ಪರ್ಧಿಸುತ್ತಿರುವ ಭಾರತೀಯ ಜನತಾ ಪಕ್ಷದ ನಾಯಕ ಸುವೇಂದು ಅಧಿಕಾರಿ ತಮ್ಮ ಮಾತೃಪಕ್ಷ ಟಿಎಂಸಿ ವಿರುದ್ಧ ಕಿಡಿಕಾರಿದ್ದಾರೆ. ಮತ್ತೊಮ್ಮೆ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಅಧಿಕಾರಕ್ಕೆ ಬಂದರೆ ಪಶ್ಚಿಮ ಬಂಗಾಳ ಕಾಶ್ಮೀರ ಆಗುತ್ತದೆ ಎಂದು ಅವರು ಹೇಳಿಕೆ ನೀಡಿದ್ದಾರೆ.
ಶನಿವಾರ ಬೆಹಾಲಾದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅಧಿಕಾರಿ, "ಶ್ಯಾಮ್ ಪ್ರಸಾದ್ ಮುಖರ್ಜಿ ಇಲ್ಲದಿದ್ದರೆ ಈ ದೇಶ ಇಸ್ಲಾಮಿಕ್ ದೇಶವಾಗುತ್ತಿತ್ತು ಮತ್ತು ನಾವು ಬಾಂಗ್ಲಾದೇಶದಲ್ಲಿ ವಾಸಿಸುತ್ತಿದ್ದೆವು. ಅವರು (ಟಿಎಂಸಿ) ಮತ್ತೆ ಅಧಿಕಾರಕ್ಕೆ ಬಂದರೆ ಪಶ್ಚಿಮ ಬಂಗಾಳ ಕಾಶ್ಮೀರ ಆಗಿ ಮಾರ್ಪಡಲಿದೆ" ಎಂದು ಹೇಳಿದರು.
"ನಂದಿಗ್ರಾಮ ನನಗೆ ಸವಾಲಾಗಿಲ್ಲ. ನಾನು ಮಮತಾ ಬ್ಯಾನರ್ಜಿಯನ್ನು ಸೋಲಿಸಲು ಮತ್ತು ಅವಳನ್ನು ಮರಳಿ ಕೋಲ್ಕತ್ತಾಗೆ ಕಳುಹಿಸಲು ನಂದಿಗ್ರಾಮದಿಂದ ಚುನಾವಣೆ ಎದುರಿಸುತ್ತಿದ್ದೇನೆ. ನನಗೆ ನೀಡಿದ ಮಹತ್ತರ ಜವಾಬ್ದಾರಿಗಾಗಿ ರಾಷ್ಟ್ರೀಯ ಪಕ್ಷದ ನಾಯಕತ್ವಕ್ಕೆ ಧನ್ಯವಾದ ಅರ್ಪಿಸುತ್ತೇನೆ ಮತ್ತು ಪಶ್ಚಿಮ ಬಂಗಾಳದಾದ್ಯಂತ ಟಿಎಂಸಿ ಸೋಲಲಿದೆ. 50,000 ಮತಗಳಿಂದ ನಾನು ಮಮತಾ ಬ್ಯಾನರ್ಜಿಯನ್ನು ಸೋಲಿಸುತ್ತೇನೆ ಎಂದು ಅವರು ಹೇಳಿದರು.
ಟಿಎಂಸಿ ನಾಯಕಿ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿ ಶನಿವಾರ ನಂದಿಗ್ರಾಮ್ನಿಂದ ಸುವೇಂದು ಅಧಿಕಾರಿಯನ್ನು ಕಣಕ್ಕಿಳಿಸಿ, ರಾಜ್ಯ ವಿಧಾನಸಭಾ ಚುನಾವಣೆಗೆ ಉನ್ನತ ಮಟ್ಟದ ಸ್ಪರ್ಧೆಗೆ ವೇದಿಕೆ ಕಲ್ಪಿಸಿದೆ.