ಬಿಜೆಪಿ ಸೇರ್ಪಡೆಯ ಹಿಂದಿನ ಕಾರಣ ತಿಳಿಸಿದ ಮಿಥುನ್ ಚಕ್ರವರ್ತಿ
ಹೊಸದಿಲ್ಲಿ: ನನ್ನ ಜೀವಮಾನದ ಕನಸಾಗಿರುವ ಬಡವರಿಗೆ ಸಹಾಯ ಮಾಡುವ ಉದ್ದೇಶದಿಂದಲೇ ನಾನು ಬಿಜೆಪಿ ಪಕ್ಷ ಸೇರಿದ್ದು, ಪಕ್ಷ ಸೇಪರ್ಡೆಯ ಹಿಂದಿನ ಕಾರಣ ಇದಾಗಿದೆ ಎಂದು ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಹೇಳಿದ್ದಾರೆ.
ಬಿಜೆಪಿಗೆ ಸೇರಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಚಕ್ರವರ್ತಿ, ನೀವು ನನ್ನನ್ನು ಸ್ವಾರ್ಥಿಯನ್ನಾಗಿ ಮಾಡಬಹುದು ಅಥವಾ ಇನ್ನಾವುದನ್ನೂ ಮಾಡಬಹುದು. ಆದರೆ, ನನ್ನ ಸ್ವಾರ್ಥದ ಹಿಂದಿನ ಕಾರಣವೇನೆಂದರೆ ನಾನು ಬಡಜನರೊಂದಿಗೆ ಇರಲು ಬಯಸುತ್ತೇನೆ. ನಾನು 18 ವರ್ಷ ವಯಸ್ಸಿನವನಾಗಿದ್ದಾಗಲೇ ಬಡ ಜನರೊಂದಿಗೆ ಇರಬೇಕೆನ್ನುವುದು ನನ್ನ ಕನಸಾಗಿತ್ತು. ನಾನು ಅವರಿಗೆ ಸಹಾಯ ಮಾಡುತ್ತೇನೆ. ಅವರಿಗೆ ಗೌರವ ನೀಡುತ್ತೇನೆ ಎಂದು ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟ ಹೇಳಿದರು.
ನಾನು ಈ ಹಿಂದೆ ಯಾವುದೇ ಪಕ್ಷದೊಂದಿಗೆ ಸಂಬಂಧ ಹೊಂದಿರಲಿಲ್ಲ. ತೃಣಮೂಲ ಕಾಂಗ್ರೆಸ್ ನನ್ನನ್ನು ರಾಜ್ಯಸಭಾ ಸಂಸದನನ್ನಾಗಿ ಮಾಡಿತ್ತು. ಅದೊಂದು ಕೆಟ್ಟ ನಿರ್ಧಾರವಾಗಿತ್ತು. ನಾನು ರಾಜ್ಯಸಭಾ ಸಂಸದನ ಸ್ಥಾನ ತ್ಯಜಿಸಿದ್ದೆ. ನಾನು ಯಾರ ಮೇಲೂ ಬೆರಳು ತೋರಿಸಲು ಬಯಸಲಾರೆ. ಇದು ನನ್ನ ಕೆಟ್ಟ ನಿರ್ಧಾರ. ಆ ವಿಷಯವನ್ನು ಇಲ್ಲಿ ಕೊನೆಗೊಳಿಸೋಣ ಎಂದು ನಟ ಹೇಳಿದರು.
ಪ.ಬಂಗಾಳದಲ್ಲಿ ಬಿಜೆಪಿ ಖಂಡಿತವಾಗಿಯೂ ಸರಕಾರ ರಚಿಸುತ್ತದೆ. ನಾವೆಲ್ಲರೂ ಪ್ರಧಾನಮಂತ್ರಿ ಕನಸಾಗಿರುವ ಸೋನಾರ್ ಬಾಂಗ್ಲಾವನ್ನು ಈಡೇರಿಸಿದರೆ ಆಗ ನಾನು ಹೆಮ್ಮೆಯ ವ್ಯಕ್ತಿಯಾಗುತ್ತೇನೆ ಎಂದು ಚಕ್ರವರ್ತಿ ಹೇಳಿದರು.