ದಿಲ್ಲಿಯ ಗುರುದ್ವಾರ ಬಂಗ್ಲಾ ಸಾಹಿಬ್ ನಲ್ಲಿ ದೇಶದ ಅತಿದೊಡ್ಡ ಡಯಾಲಿಸಿಸ್ ಕೇಂದ್ರ ಉದ್ಘಾಟನೆ
ಹೊಸದಿಲ್ಲಿ: ದಿಲ್ಲಿಯ ಸಿಖ್ ಗುರುದ್ವಾರದ ಆಡಳಿತ ಸಮಿತಿ(ಡಿಎಸ್ ಜಿಎಂಸಿ) ಇಲ್ಲಿನ ಗುರುದ್ವಾರ ಬಾಂಗ್ಲಾ ಸಾಹಿಬ್ ಸಂಕೀರ್ಣದಲ್ಲಿ “ಭಾರತದ ಅತ್ಯಂತ ದೊಡ್ಡ’ ಕಿಡ್ನಿ ಡಯಾಲಿಸಿಸ್ ಸೌಲಭ್ಯವನ್ನು ರವಿವಾರ ಲೋಕಾರ್ಪಣೆಗೊಳಿಸಿದೆ.
ಗುರು ಹರಿಕೃಷ್ಣ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಹಾಗೂ ರಿಸರ್ಚ್ ಕಿಡ್ನಿ ಡಯಾಲಿಸಿಸ್ ಹಾಸ್ಪಿಟಲ್ ಏಕಕಾಲಕ್ಕೆ 101 ರೋಗಿಗಳಿಗೆ ಹಾಗೂ ಪ್ರತಿದಿನ 500 ರೋಗಿಗಳಿಗೆ ಡಯಾಲಿಸಿಸ್ ಸೌಲಭ್ಯ ಒದಗಿಸಲಿದೆ ಎಂದು ಡಿಎಸ್ ಜಿಎಂಸಿ ತಿಳಿಸಿದೆ.
ಆಸ್ಪತ್ರೆ ಈ ಸೌಲಭ್ಯವನ್ನು ರೋಗಿಗಳಿಗೆ ಸಂಪೂರ್ಣ ಉಚಿತವಾಗಿ ನೀಡಲಿದೆ.
ಇದರ ಸಾಮರ್ಥ್ವವನ್ನು ಶೀಘ್ರದಲ್ಲೇ 101 ಬೆಡ್ ನಿಂದ 1000 ಬೆಡ್ ಗಳಿಗೆ ಏರಿಕೆ ಮಾಡಲಾಗುವುದು ಎಂದು ಹೇಳಿಕೆ ತಿಳಿಸಿದೆ.
ಪ್ರತಿಯೊಬ್ಬರಿಗೂ ಉಚಿತ ಸೇವೆಗಳನ್ನು ನೀಡುವ ಯೋಜನೆಯನ್ನು ಆರಂಭಿಸಿರುವ ಸಿಖ್ ಸಮುದಾಯವನ್ನು ರೈತ ನಾಯಕ ರಾಕೇಶ್ ಟಿಕಾಯತ್ ಇದೇ ವೇಳೆ ಶ್ಲಾಘಿಸಿದರು.
ತಾಂತ್ರಿಕವಾಗಿ ಮುಂದುವರಿದ ಈ ಆಸ್ಪತ್ರೆಯಲ್ಲಿ ಎಲ್ಲ ಸೇವೆಗಳನ್ನು ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುತ್ತಿದೆ. ಯಾವುದೇ ಬಿಲ್ಲಿಂಗ್ ಅಥವಾ ಪಾವತಿ ಕೌಂಟರ್ ಇಲ್ಲ. ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿಯಿಂದ ಕಾರ್ಪೋರೇಟ್ ಸಂಸ್ಥೆಗಳಿಂದ, ಅಂತಹ ಉಪಕ್ರಮಗಳಿಗೆ ಕೊಡುಗೆ ನೀಡಲು ಸಿದ್ದವಿರುವವರು, ಸರಕಾರದ ವಿವಿಧ ಯೋಜನೆಗಳಿಂದ ಡಿಎಸ್ ಜಿಎಂಸಿ ಸೇವೆ ತೆಗೆದುಕೊಳ್ಳುತ್ತದೆ ಎಂದು ಡಿಎಸ್ ಜಿಎಂಸಿ ಅಧ್ಯಕ್ಷ ಮಂಜಿಂದರ್ ಸಿಂಗ್ ಸಿರ್ಸಾ ತಿಳಿಸಿದ್ದಾರೆ.