ನಾನೇನಾದರೂ ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸಲು ಸಿದ್ಧ: ತಾಪ್ಸಿ ಪನ್ನು ಹೇಳಿಕೆ
"ನನಗೆ ಭಯಪಡಲು ಏನೂ ಇಲ್ಲ"
ಮುಂಬೈ: ಕಳೆದ ವಾರದ ಆದಾಯ ತೆರಿಗೆ ದಾಳಿಗಳ ಕುರಿತು ಪ್ರತಿಕ್ರಿಯಿಸಿರುವ ನಟಿ ತಾಪ್ಸೀ ಪನ್ನು, ತಮಗೆ ಭಯಪಡಲು ಏನೂ ಇಲ್ಲ ಹಾಗೂ ದಾಳಿ ಏಕೆ ನಡೆದಿದೆ ಎಂದು ತಿಳಿದಿಲ್ಲ ಎಂದಿದ್ದಾರೆ. "ನಾನೇನಾದರೂ ತಪ್ಪು ಮಾಡಿದ್ದರೆ ನಾನು ಶಿಕ್ಷೆ ಅನುಭವಿಸುತ್ತೇನೆ" ಎಂದು Ndtv.com ಗೆ ನೀಡಿದ ಸಂದರ್ಶನದಲ್ಲಿ ಆಕೆ ಹೇಳಿದ್ದಾರೆ.
ತಾವು ಮತ್ತು ತಮ್ಮ ಕುಟುಂಬ ದಾಳಿ ವೇಳೆ ಎಲ್ಲಾ ಸಹಕಾರ ನೀಡಿದ್ದೇವೆ ಎಂದು ಆಕೆ ಹೇಳಿದ್ದಾರೆ. "ನನಗೆ ಯಾರು ರೂ 5 ಕೋಟಿ ಕೊಡುತ್ತಿರುಬಹುದೆಂದು ನನಗೇ ಅಚ್ಚರಿಯಾಗಿತ್ತು. ಪ್ಯಾರಿಸ್ನಲ್ಲಿ ನನಗೊಂದು ಬಂಗಲೆಯಿದೆ ಎಂಬ ಸುದ್ದಿಯೂ ಇದೆ. ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ನಾನು ಮತ್ತು ನನ್ನ ಕುಟುಂಬ ಐಟಿ ಇಲಾಖೆ ಜತೆ ಸಹಕರಿಸಿದ್ದೇವೆ" ಎಂದು ದಾಳಿ ಕುರಿತಂತೆ ಹೇಳಿದ ತಾಪ್ಸೀ, ದಾಳಿ ಬೆದರಿಕೆ ಹುಟ್ಟಿಸುವಂತಹದ್ದು ಎಂದೂ ಹೇಳಿದ್ದಾರೆ.
"ಏನಾದರೂ ತಪ್ಪಿದ್ದರೆ ಅದು ಹೊರ ಬರುವುದು. ನನಗೆ ಏನನ್ನೂ ಅಡಗಿಸಿಡಲು ಸಾಧ್ಯವಿಲ್ಲ. ನಾನು ಏನಾದರೂ ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸುತ್ತೇನೆ" ಎಂದಿದ್ದಾರೆ.
ದಾಳಿಗಳು ಏಕೆ ನಡೆದವು ಎಂಬ ಪ್ರಶ್ನೆಗೆ ತಮಗೆ ಕಾರಣ ತಿಳಿದಿಲ್ಲ, ಆದರೆ ದಾಳಿ ನಡೆದಾಗ ನಿಯಮಗಳನ್ನು ಪಾಲಿಸದೆ ಬೇರೆ ಮಾರ್ಗವಿಲ್ಲ ಎಂದು ಅವರು ಹೇಳಿದ್ದಾರೆ.
ದಾಳಿಗಳ ಕುರಿತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ತಾಪ್ಸಿ "ಅದೊಂದು ಪ್ರಕ್ರಿಯೆ ಅದನ್ನು ವೈಭವೀಕರಿಸಬೇಡಿ ಎಂದು ಸಚಿವೆ ಹೇಳಿರುವುದು ಸಮಾಧಾನ ತಂದಿದೆ," ಎಂದಿದ್ದಾರೆ.