ಆರೋಗ್ಯಕ್ಷೇತ್ರಕ್ಕೆ ಹೊಸ ನಿಧಿ: ಕೇಂದ್ರ ಸಂಪುಟ ಅನುಮೋದನೆ
ಹೊಸದಿಲ್ಲಿ: ಆರೋಗ್ಯಕ್ಷೇತ್ರದ ವಿವಿಧ ಯೋಜನೆಗಳಿಗೆ ಅನುದಾನ ಒದಗಿಸುವ ಉದ್ದೇಶದ ಪ್ರಧಾನಮಂತ್ರಿ ಸ್ವಾಸ್ಥ ಸುರಕ್ಷಾ ನಿಧಿ(ಪಿಎಂಎಸ್ಎಸ್ಎನ್)ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಮೇಲಿನ ಸೆಸ್(ಉಪತೆರಿಗೆ)ನಿಂದ ಲಭಿಸುವ ಹಣವನ್ನು ಈ ನಿಧಿಗೆ ವರ್ಗಾಯಿಸಲಾಗುವುದು. ಈ ನಿಧಿ ಆಯಾ ಆರ್ಥಿಕ ವರ್ಷದ ಅಂತ್ಯಕ್ಕೆ ರದ್ದಾಗುವುದಿಲ್ಲ, ಮುಂದಿನ ವರ್ಷಕ್ಕೆ ಮುಂದುವರಿಯುತ್ತದೆ. ಆರೋಗ್ಯ ಕ್ಷೇತ್ರದ ಸೌಲಭ್ಯವನ್ನು ಸಾರ್ವತ್ರಿಕಗೊಳಿಸುವುದು ಮತ್ತು ಎಲ್ಲರಿಗೂ ಸುಲಭಸಾಧ್ಯವಾಗಿಸುವುದು ಈ ನಿಧಿಯ ಪ್ರಮುಖ ಉದ್ದೇಶವಾಗಿದೆ. 3% ಇದ್ದ ಶಿಕ್ಷಣ ಉಪಕರವನ್ನು 2018ರ ಬಜೆಟ್ನಲ್ಲಿ ಶಿಕ್ಷಣ ಮತ್ತು ಆರೋಗ್ಯ ಉಪಕರ ಎಂದು ಹೆಸರಿಸಿ 4%ಕ್ಕೇರಿಸಲಾಗಿದೆ.ಈ ವಿಭಾಗದಡಿ ಸಂಗ್ರಹವಾಗುವ ಮೊತ್ತದಲ್ಲಿ ಆರೋಗ್ಯಕ್ಷೇತ್ರದ ಭಾಗವನ್ನು ಪಿಎಂಎಸ್ಎಸ್ಎನ್ಗೆ ವರ್ಗಾಯಿಸಲಾಗುವುದು. ಈ ನಿಧಿಯನ್ನು ಆರೋಗ್ಯ ಕ್ಷೇತ್ರದ ಪ್ರಮುಖ ಯೋಜನೆಗಳಾದ ಆಯುಷ್ಮಾನ್ ಭಾರತ್-ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ, ಆಯುಷ್ಮಾನ್ ಭಾರತ್-ಆರೋಗ್ಯ ಮತ್ತು ಕ್ಷೇಮ ಕೇಂದ್ರ, ರಾಷ್ಟ್ರೀಯ ಅರೋಗ್ಯ ಅಭಿಯಾನ, ಪ್ರಧಾನಮಂತ್ರಿ ಸ್ವಾಸ್ಥ ಸುರಕ್ಷ ಯೋಜನೆಗಳಿಗೆ; ಹಾಗೂ ಇತರ ಯೋಜನೆಗಳಿಗೆ ಬಳಸಲಾಗುವುದು.
ಈ ನಿಧಿಯ ವ್ಯವಸ್ಥಾಪನೆ ಮತ್ತು ನಿರ್ವಹಣೆಯನ್ನು ಕೇಂದ್ರ ಆರೋಗ್ಯ ಇಲಾಖೆಗೆ ವಹಿಸಲಾಗಿದೆ ಎಂದು ಎಂದು ಮೂಲಗಳು ಹೇಳಿವೆ.