ರಿಪಬ್ಲಿಕ್ ಟಿವಿಯ ಅರ್ನಬ್ ಗೋಸ್ವಾಮಿಗೆ ನೋಟಿಸ್ ಜಾರಿಗೊಳಿಸಿದ ದಿಲ್ಲಿ ನ್ಯಾಯಾಲಯ
ಪಿಎಫ್ಐ ನಾಯಕನ ಬಗ್ಗೆ 'ಕುಟುಕು ಕಾರ್ಯಾಚರಣೆ' ವೀಡಿಯೋ
ಅರ್ನಬ್ ಗೋಸ್ವಾಮಿ (File Photo: PTI)
ಹೊಸದಿಲ್ಲಿ: ರಿಪಬ್ಲಿಕ್ ಟಿವಿ ಸುದ್ದಿ ವಾಹಿನಿ ಪ್ರಸಾರ ಮಾಡಿದ್ದ 'ಕುಟುಕು ಕಾರ್ಯಾಚರಣೆ'ಯ ವೀಡಿಯೋ ವಿರುದ್ಧ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಪಿಆರ್ ನಿರ್ದೇಶಕ ಡಾ ಎಂ ಶಮೂನ್ ಅವರು ದಾಖಲಿಸಿದ್ದ ಸಿವಿಲ್ ಮಾನಹಾನಿ ಮೊಕದ್ದಮೆಯನ್ನು ಗಣನೆಗೆ ತೆಗೆದುಕೊಂಡಿರುವ ದಿಲ್ಲಿಯ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಮಂಗಳವಾರ ಚಾನೆಲ್ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ಹಾಗೂ ಇತರ ಪ್ರತಿವಾದಿಗಳಿಗೆ ಮೇ 27ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಿದೆ.
ಶಮೂನ್ ಅವರು ಹಿಂಸಾತ್ಮಕ ಪ್ರತಿಭಟನೆಗಳನ್ನು ಹಾಗೂ ಸರಕಾರದ ವಿರುದ್ಧ ಕ್ರಿಮಿನಲ್ ಒತ್ತಡ ಹೇರಲು ಪ್ರೋತ್ಸಾಹಿಸಿದ್ದಾರೆಂದು ತಿರುಚಿದ ವೀಡಿಯೋವನ್ನು ರಿಪಬ್ಲಿಕ್ ವಾಹಿನಿ ಪ್ರಸಾರ ಮಾಡಿತ್ತು ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ತಾವು ಯಾವತ್ತೂ ಹಿಂಸಾತ್ಮಕ ಪ್ರತಿಭಟನೆಯನ್ನು ಪ್ರೋತ್ಸಾಹಿಸಿಲ್ಲ ಎಂದು ಅಪೀಲುದಾರರು ಹೇಳಿದ್ದಾರಲ್ಲದೆ ತಮ್ಮನ್ನು ಭೇಟಿಯಾಗಿದ್ದ ರಿಸರ್ಚ್ ಸ್ಕಾಲರ್ ಒಬ್ಬರು ಶಾಹೀನ್ ಭಾಗ್ನಲ್ಲಿನ ಸಿಎಎ ವಿರೋಧಿ ಪ್ರತಿಭಟನೆಗಳ ಕುರಿತು ಮಾತನಾಡುತ್ತಾ ಹಿಂಸಾತ್ಮಕ ಪ್ರತಿಭಟನೆಗಳ ಅಗತ್ಯದ ಬಗ್ಗೆ ಹೇಳಿಕೊಂಡಿದ್ದರೂ ತಾವು ಆತನಿಗೆ ತಿಳಿ ಹೇಳಿ ಪ್ರಜಾಸತ್ತಾತ್ಮಕ ರೀತಿಯ ಪ್ರತಿಭಟನೆಗಳ ಬಗ್ಗೆ ಯೋಚಿಸಬೇಕೆಂದು ಹೇಳಿದ್ದೆ ಎಂದು ಶಮೂನ್ ತಮ್ಮ ಅಪೀಲಿನಲ್ಲಿ ಹೇಳಿದ್ದಾರೆ.
ಆದರೆ ಈ ಸಂವಾದವನ್ನು ರಿಪಬ್ಲಿಕ್ ವಾಹಿನಿ ಕಟ್ ಎಂಡ್ ಪೇಸ್ಟ್ ಮಾಡಿ ಇದನ್ನೊಂದು 'ಕುಟುಕು ಕಾರ್ಯಾಚರಣೆ' ಎಂದು ಪ್ರಸಾರ ಮಾಡಿತ್ತು ಇದರಿಂದ ತಮಗೆ ವೈಯಕ್ತಿಕವಾಗಿ ಬಹಳಷ್ಟು ನಷ್ಟವಾಗಿದೆ ಎಂದು ಅವರು ತಮ್ಮ ಅಪೀಲಿನಲ್ಲಿ ಹೇಳಿದ್ದಾರೆ.