ದಿಲ್ಲಿ ಸರಕಾರದ ಅಧಿಕಾರ ಕುಗ್ಗಿಸುವ ಎನ್ ಸಿಟಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ
ಕಾಂಗ್ರೆಸ್, ಆಮ್ ಆದ್ಮಿ ಪಕ್ಷದಿಂದ ತೀವ್ರ ವಿರೋಧ
ಹೊಸದಿಲ್ಲಿ: ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಗೆ ಹೆಚ್ಚಿನ ಅಧಿಕಾರವನ್ನು ನೀಡುವ ಹಾಗೂ ದಿಲ್ಲಿ ಸರಕಾರದ ಅಧಿಕಾರವನ್ನು ಕುಗ್ಗಿಸುವ 2021ರ ರಾಷ್ಟ್ರೀಯ ರಾಜಧಾನಿ ದಿಲ್ಲಿ(ತಿದ್ದುಪಡಿ)ಮಸೂದೆಯನ್ನು ಸೋಮವಾರ ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ.
ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷಗಳ ತೀವ್ರ ವಿರೋಧದ ನಡುವೆ ಎನ್ ಸಿಪಿ ಮಸೂದೆಯನ್ನು ಕೆಳಮನೆಯಲ್ಲಿ ಅಂಗೀಕರಿಸಲಾಯಿತು. ಈ ಮಸೂದೆ 'ಅಸಾಂವಿಧಾನಿಕ' ಎಂದು ಕಾಂಗ್ರೆಸ್ ಹಾಗೂ ಆಪ್ ಆಪಾದಿಸಿವೆ.
ಮಸೂದೆಯ ಪ್ರಕಾರ ದಿಲ್ಲಿಯಲ್ಲಿ 'ಸರಕಾರ' ಎಂದರೆ 'ಲೆಫ್ಟಿನೆಂಟ್ ಗವರ್ನರ್' ಆಗಿರುತ್ತಾರೆ.
ದಿಲ್ಲಿ ಸರಕಾರ ಯಾವುದೇ ಕ್ರಮ ಕೈಗೊಳ್ಳಬೇಕಾದರೆ ಲೆಫ್ಟಿನೆಂಟ್ ಗವರ್ನರ್ ಅನುಮತಿಯನ್ನು ಪಡೆಯಬೇಕಾಗುತ್ತದೆ.
ಈ ಬೆಳವಣಿಗೆಯ ಬಗ್ಗೆ ಟ್ವಿಟರ್ ಮೂಲಕ ಪ್ರತಿಕ್ರಿಯಿಸಿದ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಲೋಕಸಭೆಯಲ್ಲಿ ಇಂದು ಅಂಗೀಕರಿಸಿರುವ ಜಿಎನ್ ಸಿಟಿಡಿ ತಿದ್ದುಪಡಿ ಮಸೂದೆಯು ದಿಲ್ಲಿಯ ಜನತೆಗೆ ಮಾಡಿರುವ ಅವಮಾನವಾಗಿದೆ. ಈ ಮಸೂದೆಯು ಜನರ ಮತ ಪಡೆದವರಿಂದ ಅಧಿಕಾರ ಕಸಿದುಕೊಂಡು, ಸೋತವರಿಗೆ ನೀಡುತ್ತದೆ. ಬಿಜೆಪಿ ಜನರನ್ನು ಮೋಸ ಮಾಡಿದೆ ಎಂದರು.