"ಬಂಗಾಳದ ಸಂಸ್ಕೃತಿ ಪ್ರಕಾರ ಮಹಿಳೆಯರು ಸೀರೆ ಧರಿಸಿ ಕಾಲು ಪ್ರದರ್ಶಿಸುವುದು ತಪ್ಪು": ದಿಲೀಪ್ ಘೋಷ್
ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ
ಕೋಲ್ಕತ್ತಾ: ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಗುರಿಯಾಗಿಸಿಕೊಂಡು "ಸೀರೆ ಧರಿಸಿ ಕಾಲು ತೋರಿಸುವುದಕ್ಕಿಂತ ಸೀರೆ ಕಿತ್ತೆಸೆದು ಬರ್ಮುಡಾ ಧರಿಸಿ" ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯು ಆಕ್ರೋಶ ಹುಟ್ಟುಹಾಕಿದ ನಂತರ, ಅವರು ಗುರುವಾರ ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು indiatoday.in ವರದಿ ಮಾಡಿದೆ.
“ಮಮತಾ ಬ್ಯಾನರ್ಜಿ ನಮ್ಮ ಮುಖ್ಯಮಂತ್ರಿ, ಅವರೋರ್ವ ಮಹಿಳೆಯಾಗಿದ್ದಾರೆ. ಬಂಗಾಳದ ಸಂಸ್ಕೃತಿಯೊಂದಿಗೆ ಬೆರೆತುಕೊಂಡಿರುವ ಅವರಿಂದ ಸಭ್ಯತೆಯನ್ನು ನಾವು ನಿರೀಕ್ಷಿಸುತ್ತೇವೆ. ಓರ್ವ ಮಹಿಳೆಯಾಗಿದ್ದುಕೊಂಡು ಸೀರೆ ಧರಿಸುವಾಗ ನಿರಂತರವಾಗಿ ತನ್ನ ಕಾಲುಗಳನ್ನು ಪ್ರದರ್ಶಿಸುತ್ತಿದ್ದಾರೆ. ಇದು ಯೋಗ್ಯವಲ್ಲ. ನಾನು ಅದನ್ನು ಆಕ್ಷೇಪಾರ್ಹವೆಂದು ಕಂಡುಕೊಂಡಿದ್ದೇನೆ, ಆದ್ದರಿಂದ ಅದರ ವಿರುದ್ಧ ಪ್ರತಿಭಟಿಸಿದ್ದೇನೆ” ಎಂದು ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆಂದು ವರದಿಗಳು ತಿಳಿಸಿವೆ.
"ಹಲವಾರು ಮಂದಿ ಈ ಕುರಿತಾದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚಿಸುತ್ತಿದ್ದಾರೆ. ಅಲ್ಲದೇ, ಹಲವಾರು ಮಹಿಳೆಯರು ಕೂಡಾ ಮಮತಾ ಬ್ಯಾನರ್ಜಿಯ ಈ ನಡೆ ಒಳ್ಳೆಯದಲ್ಲ" ಎಂದು ದಿಲೀಪ್ ಗೋಷ್ ಹೇಳಿಕೆ ನೀಡಿದ್ದಾರೆ.