ಬಂಗಾಳದಲ್ಲಿ ಏನಾಗುತ್ತಿದೆ ಎಂದು ಅಮಿತ್ ಶಾ ಕೇಳುತ್ತಿದ್ದಾರೆ, ಯುಪಿ, ಹತ್ರಸ್ ನಲ್ಲಿ ಏನಾಗುತ್ತಿದೆ?
ಮಮತಾ ಬ್ಯಾನರ್ಜಿ ಪ್ರಶ್ನೆ
ಕೋಲ್ಕತ್ತ: ಟಿಎಂಸಿ ಕಾರ್ಯಕರ್ತರಿಂದ ಹಲ್ಲೆಗೊಳಗಾಗಿದ್ದರು ಎಂದು ಬಿಜೆಪಿಯು ಆರೋಪಿಸಿದ್ದ ವೃದ್ಧ ಮಹಿಳೆಯು ಇಂದು ಮೃತಪಟ್ಟಿದ್ದು, ಈ ಕುರಿತಾದಂತೆ ಅಮಿತ್ ಶಾ, "ಪಶ್ಚಿಮ ಬಂಗಾಳದ ಪರಿಸ್ಥಿತಿ ಏನಾಗುತ್ತಿದೆ?" ಎಂದು ರ್ಯಾಲಿಯಲ್ಲಿ ಮಾತನಾಡುತ್ತಾ ಹೇಳಿಕೆ ನೀಡಿದ್ದರು. ಈ ಕುರಿತಾದಂತೆ ಮಮತಾ ಬ್ಯಾನರ್ಜಿ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ಇಂದು ನಂದಿಗ್ರಾಮದಲ್ಲಿ ನಡೆದ ಪಾದಯಾತ್ರೆಯನ್ನುದ್ದೇಶಿಸಿ ಮಾತನಾಡಿದ ಮಮತಾ "ಅವರು ಹೇಗೆ ಮೃತಪಟ್ಟಿದ್ದಾರೆಂದು ನನಗೆ ತಿಳಿದಿಲ್ಲ. ಮಹಿಳೆಯರ ವಿರುದ್ಧದ ದೌರ್ಜನ್ಯವನ್ನು ನಾವು ಬೆಂಬಲಿಸುವುದಿಲ್ಲ" ಎಂದು ಹೇಳಿಕೆ ನೀಡಿದರು.
ಮುಂದುವರಿದು ಮಾತನಾಡಿದ ಅವರು, "ಬಂಗಾಳದ ಪರಿಸ್ಥಿತಿ ಏನಾಗುತ್ತಿದೆ? ಎಂದು ಅಮಿತ್ ಶಾ ಟ್ವೀಟ್ ಮಾಡಿ ಕೇಳುತ್ತಿದ್ದಾರೆ. ಆದರೆ, ಉತ್ತರ ಪ್ರದೇಶದ ಪರಿಸ್ಥಿತಿ ಏನಾಗಿದೆ? ಹತ್ರಸ್ ನ ಪರಿಸ್ಥಿತಿ ಏನಾಗಿದೆ?" ಎಂದು ಅಮಿತ್ ಶಾ ರನ್ನು ಪ್ರಶ್ನಿಸಿದರು.
ಟಿಎಂಸಿಯಿಂದ ಬಿಜೆಪಿ ಸೇರಿದ್ದ ಸುವೇಂದು ಅಧಿಕಾರಿ ವಿರುದ್ಧ ಸ್ಫರ್ಧಿಸುತ್ತಿರುವ ಮಮತಾ ಬ್ಯಾನರ್ಜಿ ನಂದಿಗ್ರಾಮದಲ್ಲಿ ತಮ್ಮ ಬೆಂಬಲಿಗರೊಂದಿಗೆ 8 ಕಿ.ಮೀ ಪಾದಯಾತ್ರೆ ನಡೆಸಿದರು.