ವಿಧಾನಸಭೆ ಚುನಾವಣೆ: ದ್ವೇಷಹೇಳಿಕೆ ನಿರ್ಬಂಧಕ್ಕೆ ಕ್ರಮ; ಫೇಸ್ಬುಕ್
ಹೊಸದಿಲ್ಲಿ, ಮಾ.31: ನಾಲ್ಕು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ, ದ್ವೇಷ ಭಾಷಣ/ಹೇಳಿಕೆ ತಡೆಯಲು ತಾನು ರೂಪಿಸಿರುವ ಕಾರ್ಯನೀತಿಯನ್ನು ಉಲ್ಲಂಘಿಸುವ ವಿಷಯವನ್ನು ಅಳಿಸಿ ಹಾಕುವುದಾಗಿ ಫೇಸ್ಬುಕ್ ಬುಧವಾರ ಘೋಷಿಸಿದೆ.
ದ್ವೇಷದ ಹೇಳಿಕೆ ನಿಯಂತ್ರಿಸಲು, ತಪ್ಪು ಮಾಹಿತಿ ಪ್ರಕರಣವನ್ನು ಸೀಮಿತಗೊಳಿಸಲು, ಮತದಾರರ ನಿಗ್ರಹದ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಫೇಸ್ಬುಕ್ ಅಧಿಕಾರಿಗಳು ಹೇಳಿದ್ದಾರೆ. ವಿಧಾನಸಭೆ ಚುನಾವಣೆ 8 ಹಂತಗಳಲ್ಲಿ ನಡೆಯಲಿದ್ದು ಮೇ 2ರಂದು ಮತ ಎಣಿಕೆಯ ಬಳಿಕ ಫಲಿತಾಂಶ ಘೋಷಣೆಯಾಗಲಿದೆ.
ಭಾರತದಲ್ಲಿ 400 ಮಿಲಿಯನ್ ಬಳಕೆದಾರರನ್ನು ಹೊಂದಿರುವ ಫೇಸ್ಬುಕ್, ತನ್ನ ಕಾರ್ಯನೀತಿಯನ್ನು ಉಲ್ಲಂಘಿಸುವ ವಿಷಯಗಳನ್ನು ಪೂರ್ವಭಾವಿಯಾಗಿ ಪತ್ತೆಹಚ್ಚುವ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ದ್ವೇಷ ಭಾಷಣ/ಹೇಳಿಕೆಯನ್ನು ಒಳಗೊಂಡಿರುವ ಕೆಲವು ಹೊಸ ಪದಗಳನ್ನು ಗುರುತಿಸುವ ತಂತ್ರಜ್ಞಾನವನ್ನೂ ಅಳವಡಿಸಿಕೊಂಡಿರುವುದಾಗಿ ಫೇಸ್ಬುಕ್ ಹೇಳಿದೆ. ಚುನಾವಣೆ ಸಂದರ್ಭ ತಪ್ಪು ಮಾಹಿತಿ ಪ್ರಸಾರವನ್ನು ತಡೆಯಲು 8 ಖಾಸಗಿ ಸಂಸ್ಥೆಗಳ ನೆರವು ಪಡೆಯುವುದಾಗಿ ಫೇಸ್ಬುಕ್ ಅಧಿಕಾರಿಗಳು ಹೇಳಿದ್ದಾರೆ.