ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿ ತನಗೆ ಹಲ್ಲೆ ನಡೆಸಿದ್ದಾರೆ: ಬಿಜೆಪಿ ಶಾಸಕನ ಆರೋಪ
ಹರಿದ ಕುರ್ತಾವನ್ನು ಎಸೆದು ರಸ್ತೆ ಮೇಲೆ ಮಲಗಿ ಪ್ರತಿಭಟನೆ
ಲಕ್ನೋ: ಮುಂಬರುವ ಪಂಚಾಯತ್ ಚುನಾವಣೆಗೆ ಮತದಾರರ ಪಟ್ಟಿಗಳ ಕುರಿತಾಗಿ ವಾಗ್ವಾದ ನಡೆದ ನಂತರ ಸ್ಥಳೀಯ ಪೊಲೀಸ್ ಮುಖ್ಯಸ್ಥರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಲಕ್ನೋದಿಂದ 170 ಕಿಲೋಮೀಟರ್ ದೂರದಲ್ಲಿರುವ ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆಯ ಬಿಜೆಪಿ ಶಾಸಕರೊಬ್ಬರು ಆರೋಪಿಸಿದ್ದಾರೆ.
ಧೀರಜ್ ಓಜಾ ಎಂದು ಜನಪ್ರಿಯವಾಗಿರುವ ಶಾಸಕ ಅಭಯ್ ಕುಮಾರ್ ಅವರು ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಯಿಂದ ಕೈಯಲ್ಲಿ ಹರಿದ ಕುರ್ತಾ ಜೊತೆ ಹೊರ ಬರುತ್ತಿರುವ ದೃಶ್ಯಗಳು ವೀಡಿಯೊದಲ್ಲಿದೆ. ಹೊಸದಾಗಿ ನೇಮಕಗೊಂಡ ಪೊಲೀಸ್ ವರಿಷ್ಠಾಧಿಕಾರಿ ಆಕಾಶ್ ತೋಮರ್ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕ್ಯಾಮರಾ ಮುಂದೆ ಕುಮಾರ್ ಆರೋಪಿಸಿದರು.
"ಏಕ್ ವಿಧಾಯಕ್ ಕೊ ಮಾರಾ ಕಪ್ತಾನ್ ನೆ (ಎಸ್ಪಿ ಒಬ್ಬ ಶಾಸಕರ ಮೇಲೆ ಹಲ್ಲೆ ಮಾಡಿದ್ದಾರೆ)" ಎಂದು ವೈರಲ್ ಕ್ಲಿಪ್ ನಲ್ಲಿ ಓಜಾ ಹೇಳುತ್ತಾರೆ, ಬಳಿಕ ಅವರು ನೆಲದ ಮೇಲೆ ಮಲಗಿ ಪ್ರತಿಭಟನೆ ನಡೆಸುತ್ತಾರೆ.
"ನಾನು ಯಾವುದೇ ತಪ್ಪು ಮಾಡಿಲ್ಲ. ಎಸ್ಪಿ ನನ್ನನ್ನು ಹೊಡೆಯಲು ಬಯಸುತ್ತಾರೆ. ಆತ ಅಪಾಯಕಾರಿ ವ್ಯಕ್ತಿ, ಅವರು ನನ್ನನ್ನು ಕೊಲ್ಲುತ್ತಾರೆ" ಎಂದು ಶಾಸಕ ಕುಮಾರ್ ಆರೋಪಿಸಿದ್ದಾರೆ.
ಡಿಎಂ ಕಚೇರಿಯಲ್ಲಿ ಕೆಟ್ಟದಾಗಿ ವರ್ತಿಸಬೇಡಿ ಎಂದು ನಾನು ಹೇಳಿದ ನಂತರ ಶಾಸಕರು ತನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಎಂದು ಐಪಿಎಸ್ ಅಧಿಕಾರಿ ಹೇಳಿದ್ದಾರೆ.