ಕೋವಿಡ್ ನಿರ್ಮೂಲನೆಗಾಗಿ ಸೂರತ್ ಆಸ್ಪತ್ರೆ ಆವರಣದಲ್ಲಿ ಯಜ್ಞ !
"ಔಷಧಿಯಿಲ್ಲದ ಈ ರೋಗಕ್ಕೆ ಯಜ್ಞ, ಹವನಗಳೇ ಥೆರಪಿ" ಎಂದ ಸಂಘಟಕರು
photo: timesofindia.com
ಸೂರತ್: ದಕ್ಷಿಣ ಗುಜರಾತ್ನ ಅತ್ಯಂತ ದೊಡ್ಡ ಸರಕಾರಿ ಆಸ್ಪತ್ರೆಯಾಗಿರುವ ಸೂರತ್ನ ನ್ಯೂ ಸಿವಿಲ್ ಆಸ್ಪತ್ರೆಯಲ್ಲಿ ಅಸಂಖ್ಯಾತ ಸಂಖ್ಯೆಯಲ್ಲಿ ಅಂಬ್ಯುಲೆನ್ಸ್ನಲ್ಲಿ ಕೋವಿಡ್ ರೋಗಿಗಳ ಆಗಮನವಾಗುತ್ತಿರುವ ನಡುವೆಯೇ ಆಸ್ಪತ್ರೆಯ ಆವರಣದಲ್ಲಿ ಮಂಗಳವಾರ ಸಂಜೆ ಆರ್ಯ ಸಮಾಜ ಸದಸ್ಯರು 'ಕೋವಿಡ್ ನಿರ್ಮೂಲನೆಗಾಗಿ' ಯಜ್ಞವೊಂದನ್ನು ನಡೆಸಿದ್ದಾರೆ.
"ನಾವು ಆಸ್ಪತ್ರೆಯಲ್ಲಿ ಯಜ್ಞ ನಡೆಸುವ ಮೊದಲು ನಗರದ ರಾಮನಾಥ ಘೇಲ ಮತ್ತು ಕುರುಕ್ಷೇತ್ರ ರುದ್ರಭೂಮಿಯಲ್ಲೂ ಯಜ್ಞ ನಡೆಸಿದ್ದೇವೆ, ಇನ್ನು ಅಶ್ವಿನಿ ಕುಮಾರ್ ರುದ್ರಭೂಮಿಯಲ್ಲೂ ಯಜ್ಞ ನಡೆಸಲಿದ್ದೇವೆ" ಎಂದು ಹೇಳಿರುವ ಆರ್ಯ ಸಮಾಜ, ಭಟರ್ ಘಟಕದ ಅಧ್ಯಕ್ಷ ಉಮಾಶಂಕರ್ ಆರ್ಯ, ನ್ಯೂ ಸಿವಿಲ್ ಆಸ್ಪತ್ರೆಯ ಡೀನ್ ತಮಗೆ ಕರೆ ಕಳುಹಿಸಿ ಯಜ್ಞ ನಡೆಸುವಂತೆ ಸೂಚಿಸಿದ್ದರು ಎಂದು ಹೇಳಿದ್ದಾರೆ.
ಈ ವೈರಸ್ಗೆ ಯಾವುದೇ ಔಷಧಿಯಿಲ್ಲದೇ ಇರುವುದರಿದ ಇಂತಹ ಹವನ, ಯಜ್ಞಗಳೇ ಅತ್ಯುತ್ತಮ ಥೆರಪಿ ಎಂದೂ ಅವರು ಹೇಳಿಕೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಸರಕಾರಿ ಮೆಡಿಕಲ್ ಕಾಲೇಜಿನ ಡೀನ್ ರೀತಾಂಭರ ಮೆಹ್ತಾ, "ಕೋವಿಡ್ ಆಸ್ಪತ್ರೆಗಳಲ್ಲಿ ಸಮಾಜ ಸೇವೆಗೈಯ್ಯಲು ಹಲವು ಸ್ವಯಂಸೇವಕರು ಮುಂದೆ ಬರುತ್ತಿದ್ದಾರೆ. ರೋಗಿಗಳ ಸಂಬಂಧಿಕರನ್ನು ಸಮಾಧಾನಿಸಲು ಏನಾದರೂ ಮಾಡಬೇಕೆಂದು ಅವರು ಸಲಹೆ ನೀಡಿದ್ದರು. ಆದುದರಿಂದ ಸಂಗೀತ ಚಟುವಟಿಕೆಗೆ ಅನುಮತಿ ನೀಡಿದ್ದೆ ಆದರೆ ಅವರು ಯಜ್ಞ ನಡೆಸುತ್ತಾರೆಂದು ನನಗೆ ತಿಳಿದಿರಲಿಲ್ಲ" ಎಂದು ಹೇಳಿದ್ದಾರೆ.
ಆಸ್ಪತ್ರೆಯೊಳಗೆ ಕೋವಿಡ್ ರೋಗಿಗಳ ಸಂಬಂಧಿಕರಿಗೆ ಪ್ರವೇಶವಿಲ್ಲವಾಗಿದ್ದು ಅವರು ಆಸ್ಪತ್ರೆ ಕಟ್ಟಡದ ಹೊರಗೆ ನಿರ್ಮಿಸಲಾಗಿರುವ ಶೆಡ್ನಲ್ಲಿ ಕಾಯಬೇಕಿದೆ.