ನಮ್ಮ ಪಾಲಿನ ಆಕ್ಸಿಜನ್ ಅನ್ನು ದಿಲ್ಲಿ ಸರಕಾರ ಲೂಟಿಗೈದಿದೆ ಎಂದು ಆರೋಪಿಸಿದ ಹರ್ಯಾಣ ಆರೋಗ್ಯ ಸಚಿವ
ಹರ್ಯಾಣ ಆರೋಗ್ಯ ಸಚಿವ ಅನಿಲ್ ವಿಜ್
ಹೊಸದಿಲ್ಲಿ: ನಮ್ಮ ರಾಜ್ಯದ ಪಾಲಿನ ಆಕ್ಸಿಜನ್ ಅನ್ನು ದಿಲ್ಲಿಯ ಅಧಿಕಾರಿಗಳು ಸೆಳೆದಿದ್ದಾರೆಂದು ಹರ್ಯಾಣ ಸರಕಾರ ಬುಧವಾರ ಆರೋಪಿಸಿದೆ.
ದಿಲ್ಲಿ ಮೂಲಕ ಫರೀದಾಬಾದ್ಗೆ ತೆರಳುತ್ತಿದ್ದ ಆಕ್ಸಿಜನ್ ಟ್ಯಾಂಕರ್ ಒಂದನ್ನು ದಿಲ್ಲಿ ಸರಕಾರ `ಲೂಟಿ'ಗೈದಿದೆ ಎಂದು ಹರ್ಯಾಣದ ಆರೋಗ್ಯ ಸಚಿವ ಅನಿಲ್ ವಿಜ್ ಆರೋಪಿಸಿದ್ದಾರೆ. ``ನಮ್ಮ ಪಾಲಿನ ಆಕ್ಸಿಜನ್ ಅನ್ನು ದಿಲ್ಲಿಗೆ ನೀಡುವಂತೆ ಮಾಡಲಾಗಿದೆ,'' ಎಂದು ಆರೋಪಿಸಿದ ಅವರು ಹೆಚ್ಚಿನ ಮಾಹಿತಿ ಬಹಿರಂಗಗೊಳಿಸಿಲ್ಲ.
``ಹರ್ಯಾಣ ರಾಜ್ಯಕ್ಕೆ ಆಕ್ಸಿಜನ್ ಸಾಗಾಟ ಮಾಡುವ ಎಲ್ಲಾ ವಾಹನಗಳಿಗೆ ಪೊಲೀಸ್ ರಕ್ಷಣೆ ಒದಗಿಸಿ ಇಂತಹ ಕೃತ್ಯ ಮತ್ತೆ ನಡೆಯದಂತೆ ನೋಡಿಕೊಳ್ಳಲಾಗುವುದು, ಮೊದಲು ನಮ್ಮ ಅಗತ್ಯತೆಗಳನ್ನು ಪೂರೈಸುತ್ತೇವೆ, ನಂತರ ಇತರರಿಗೆ ನೀಡುತ್ತೇವೆ,'' ಎಂದು ಅವರು ಹೇಳಿದರು.
ಅನಿಲ್ ವಿಜ್ ಆರೋಪಕ್ಕೆ ದಿಲ್ಲಿ ಸರಕಾರವಿನ್ನೂ ಪ್ರತಿಕ್ರಿಯಿಸಿಲ್ಲ.
Next Story