ಉತ್ತರ ಪ್ರದೇಶ ಆಸ್ಪತ್ರೆಯಲ್ಲಿ ಕೊರೋನ ಸೋಂಕಿನಿಂದ ಐವರು ಸಾವು
ಆಮ್ಲಜನಕ ಕೊರತೆಯೇ ಸಾವಿಗೆ ಕಾರಣ ಎಂದು ಆರೋಪಿಸಿದ ಕುಟುಂಬ
ಸಾಂದರ್ಭಿಕ ಚಿತ್ರ
ಅಲಿಗಢ, ಎ. 22: ಆಮ್ಲಜನಕ ಪೂರೈಕೆಯ ಕೊರತೆಯಿಂದ ಉತ್ತರಪ್ರದೇಶ ಅಲಿಗಢದ ಖಾಸಗಿ ಆಸ್ಪತ್ರೆಯಲ್ಲಿ ಐದು ಮಂದಿ ಕೊರೋನ ಸೋಂಕಿತ ರೋಗಿಗಳು ಸಾವನ್ನಪ್ಪಿದ್ದಾರೆ. ಇಲ್ಲಿನ ಗಾಂಧಿ ಪಾರ್ಕ್ ಪ್ರದೇಶದ ನೌರಂಗಾಬಾದ್ನಲ್ಲಿ ಬುಧವಾರ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಈ ಆರೋಪವನ್ನು ಆಸ್ಪತ್ರೆಯ ಮಾಲಕ ಡಾ. ಸಂಜೀವ್ ಶರ್ಮಾ ನಿರಾಕರಿಸಿದ್ದಾರೆ. ಆಸ್ಪತ್ರೆಯಲ್ಲಿ ಆಮ್ಲಜನಕದ ದಾಸ್ತಾನು ಸಾಕಷ್ಟಿದೆ. ಆಮ್ಲಜನಕದ ಕೊರತೆಯಿಂದ ಯಾವುದೇ ರೋಗಿ ಸಾವನ್ನಪ್ಪಿಲ್ಲ ಎಂದು ಅವರು ಹೇಳಿದ್ದಾರೆ.
ದುರಂತ ಸಂಭವಿಸಿದ ಬಳಿಕ ಆಮ್ಲಜನಕದ 40 ಸಿಲಿಂಡರ್ಗಳನ್ನು ವ್ಯವಸ್ಥೆ ಮಾಡುವ ಮೂಲಕ ಆಸ್ಪತ್ರೆಯ ಆಡಳಿತ ಮಂಡಳಿ ದುರಂತವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದೆ ಎಂದು ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ ಮೃತಪಟ್ಟ ಶ್ಯಾಮ್ ಕಶ್ಯಪ್ (51) ಅವರ ಸಹೋದರ ಅನಿಲ್ ಮಾಧ್ಯಮಕ್ಕೆ ತಿಳಿಸಿದ್ದಾರೆ. ‘‘ಆಸ್ಪತ್ರೆಯಲ್ಲಿ ಸಾಕಷ್ಟು ಆಮ್ಲಜನಕದ ದಾಸ್ತಾನು ಇದ್ದಿದ್ದರೆ, ಬುಧವಾರ ರಾತ್ರಿ 9 ಗಂಟೆಗೆ ಆಮ್ಲಜನಕ ಪೂರೈಕೆ ಮಾಡುವಂತೆ ಅಧಿಕಾರಿಯನ್ನು ಇದ್ದಕ್ಕಿದ್ದಂತೆ ಯಾಕೆ ಕೇಳಿದೆ’’ ಎಂದು ಅವರು ಪ್ರಶ್ನಿಸಿದ್ದಾರೆ.