ರೈತರ ಪ್ರತಿಭಟನೆ: ಮಾತುಕತೆಗೆ ಚಾಲನೆ ಮತ್ತು ಬಿಕ್ಕಟ್ಟು ಅಂತ್ಯಕ್ಕೆ ಪ್ರಧಾನಿ ಮೋದಿಗೆ ಬುದ್ಧಿಜೀವಿಗಳ ಆಗ್ರಹ
ಹೊಸದಿಲ್ಲಿ, ಎ.24: ರೈತರ ಪ್ರತಿಭಟನೆಯ ಬಿಕ್ಕಟ್ಟನ್ನು ಅಂತ್ಯಗೊಳಿಸುವಂತೆ ಕೇಂದ್ರವನ್ನು ಆಗ್ರಹಿಸಿರುವ ದೇಶಾದ್ಯಂತದ ಖ್ಯಾತ ಬುದ್ಧಿಜೀವಿಗಳು,ರೈತರನ್ನು ತಕ್ಷಣ ಮಾತುಕತೆಗೆ ಆಹ್ವಾನಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೃಷಿ ಸಚಿವ ನರೇಂದ್ರ ತೋಮರ್ ಅವರನ್ನು ಒತ್ತಾಯಿಸಿ ಪತ್ರವೊಂದನ್ನು ಬರೆದಿದ್ದಾರೆ.
ಸರಕಾರವು ಮಾತುಕತೆಗೆ ಆಹ್ವಾನಿಸಿದರೆ ಸಕಾರಾತ್ಮಕವಾಗಿ ಸ್ಪಂದಿಸುವಂತೆ ಅವರು ವಿವಿಧ ರೈತ ಸಂಘಟನೆಗಳ ಒಕ್ಕೂಟವಾಗಿರುವ ಸಂಯುಕ್ತ ಕಿಸಾನ ಮೋರ್ಚಾವನ್ನೂ ಕೋರಿಕೊಂಡಿದ್ದಾರೆ.
ಪ್ರತಿಭಟನಾನಿರತ ರೈತರು ಮತ್ತು ಕೇಂದ್ರ ಸರಕಾರದ ನಡುವೆ ಕೊನೆಯ ಬಾರಿ ಮಾತುಕತೆ ಜ.22ರಂದು ನಡೆದಿದ್ದು ಬಿಕ್ಕಟ್ಟಿನೊಂದಿಗೆ ಅಂತ್ಯಗೊಂಡಿತ್ತು. ಬಿಕ್ಕಟ್ಟು ಇಂದಿಗೂ ಮುಂದುವರಿದಿದೆ.
ಮಾಜಿ ಉಪಕುಲಪತಿಗಳು,ಯೋಜನಾ ಆಯೋಗದ ಮಾಜಿ ಸದಸ್ಯರು, ಕೃಷಿ ತಜ್ಞರು, ನಿವೃತ್ತ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು, ಹಿರಿಯ ಪತ್ರಕರ್ತರು ಮತ್ತು ಇತರ ಗಣ್ಯರು ಬರೆದಿರುವ ಪತ್ರದಲ್ಲಿ, ನೂತನ ಕೃಷಿ ಕಾಯ್ದೆಗಳ ಅನುಷ್ಠಾನವು ತಮ್ಮ ಸಂಕಷ್ಟಗಳನ್ನು ಹೆಚ್ಚಿಸುವುದು ಮಾತ್ರವಲ್ಲ, ತಮ್ಮ ಜೀವನೋಪಾಯಕ್ಕೂ ಬೆದರಿಕೆಯೊಡ್ಡುತ್ತದೆ ಎಂದು ರೈತರು ಭಾವಿಸಿದ್ದಾರೆ ಮತ್ತು ಅದು ಸರಿಯಾಗಿಯೇ ಇದೆ.
ದೇಶಾದ್ಯಂತ ರೈತರು,ಕೃಷಿ ಕಾರ್ಮಿಕರು,ಯುವಜನರು ಮತ್ತು ನಾಗರಿಕ ಸಮಾಜದ ಸಂಘಟನೆಗಳು ಪ್ರತಿಭಟನೆಗೆ ಅದ್ಭುತ ಬೆಂಬಲ ಮತ್ತು ಸಹಕಾರವನ್ನು ನೀಡುತ್ತಿದ್ದಾರೆ. ಅನಿವಾಸಿ ಭಾರತೀಯರು ಮತ್ತು ವಿಶ್ವಾದ್ಯಂತದ ನಾಗರಿಕ ಸಮಾಜಗಳ ಸದಸ್ಯರೂ ರೈತರ ಆಂದೋಲನವನ್ನು ಬೆಂಬಲಿಸುತ್ತಿದ್ದಾರೆ. ಜಾಗತಿಕವಾಗಿ ಭಾರತವು ತಾನು ಕಾಯ್ದುಕೊಂಡು ಬಂದಿದ್ದ ಪ್ರಜಾಸತ್ತಾತ್ಮಕ ಮತ್ತು ಮಾನವ ಹಕ್ಕು ಮೌಲ್ಯಗಳಿಗೆ ಗಂಭೀರ ಹಿನ್ನಡೆಯನ್ನು ಎದುರಿಸುತ್ತಿದೆ ಎಂದಿದ್ದಾರೆ. ಸ್ವತಂತ್ರ ನಿಗಾ ಸಂಸ್ಥೆಗಳು ಬಿಡುಗಡೆಗೊಳಿಸಿರುವ ಸೂಚಿಗಳಲ್ಲಿ ಮಾನವ ಹಕ್ಕುಗಳು ಮತ್ತು ಧಾರ್ಮಿಕ ಸ್ವಾತಂತ್ರಗಳಿಗೆ ಸಂಬಂಧಿಸಿದಂತೆ ಭಾರತದ ಸ್ಥಾನವು ಈಗಾಗಲೇ ಕುಸಿದಿರುವುದನ್ನು ಪತ್ರದಲ್ಲಿ ಬೆಟ್ಟು ಮಾಡಲಾಗಿದೆ.
ಸರಕಾರದ ಹಟಮಾರಿ ನಿಲುವು ಪ್ರತಿಭಟನಾನಿರತ ಲಕ್ಷಾಂತರ ರೈತರಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳಗಳನ್ನುಂಟು ಮಾಡಿದೆ. ಈಗಾಗಲೇ 300 ಜನರು ಮೃತಪಟ್ಟಿದ್ದಾರೆ,ಇತರ ನೂರಾರು ಜನರು ಗಾಯಗೊಂಡಿದ್ದಾರೆ,ಹಲವರು ಬಂಧನಕ್ಕೊಳಗಾಗಿದ್ದಾರೆ. ಬಿಕ್ಕಟ್ಟಿಗೆ ಯಾವುದೇ ರಾಜಿ ಪರಿಹಾರ ಕಂಡು ಬರುತ್ತಿಲ್ಲ. ಪ್ರತಿಭಟನೆಯಿಂದಾಗಿ ಲಕ್ಷಾಂತರ ಕೆಲಸದ ದಿನಗಳು ವ್ಯರ್ಥವಾಗಿದ್ದು ಇದು ಕೃಷಿ ಮತ್ತು ದೇಶದ ಪ್ರಗತಿಯ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡಲಿದೆ ಎಂದು ಈ ಬುದ್ಧಿಜೀವಿಗಳು ಪತ್ರದಲ್ಲಿ ಹೇಳಿದ್ದಾರೆ.
ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದ ಕ್ರಾಂತಿಕಾರಿ ಕಿಸಾನ ಯೂನಿಯನ್ ಅಧ್ಯಕ್ಷ ಡಾ.ದರ್ಶನ್ ಪಾಲ್ ಅವರು,‘ಪತ್ರವನ್ನು ಮೂರು ದಿನಗಳ ಹಿಂದೆಯೇ ಬರೆಯಲಾಗಿದ್ದು,ನಾವೂ ಅದರ ಪ್ರತಿಯನ್ನು ಸ್ವೀಕರಿಸಿದ್ದೇವೆ. ಆದರೆ ಈವರೆಗೆ ನಮಗೆ ಸರಕಾರದಿಂದ ಯಾವುದೇ ಸಂಕೇತ ಲಭಿಸಿಲ್ಲ. ಸರಕಾರವು ಈ ಬಗ್ಗೆ ವಿಚಾರ ಮಾಡಬೇಕು ಮತ್ತು ಮಾತುಕತೆಯನ್ನು ಆರಂಭಿಸಬೇಕು’ ಎಂದು ಹೇಳಿದರು.