ಉತ್ತರಪ್ರದೇಶ: ಮರಣ ಪ್ರಮಾಣ ಪತ್ರ ನೀಡದ ಆರೋಪ; ವೈದ್ಯನ ಕೆನ್ನೆಗೆ ಬಾರಿಸಿದ ನರ್ಸ್
ಲಕ್ನೋ, ಎ. 26: ಕೊರೋನ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯೋರ್ವನ ಮರಣ ಪ್ರಮಾಣ ಪತ್ರ ನೀಡಲು ನಿರಾಕರಿಸಿದ ಆರೋಪದಲ್ಲಿ ನರ್ಸ್ (ದಾದಿ) ಓರ್ವರು ಹಿರಿಯ ವೈದ್ಯರ ಕೆನ್ನೆಗೆ ಬಾರಿಸಿದ ಆಘಾತಕಾರಿ ಘಟನೆ ಇಲ್ಲಿನ ರಾಮ್ಪುರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಘಟನೆಯನ್ನು ಆಸ್ಪತ್ರೆಯ ಸಿಬ್ಬಂದಿಯೋರ್ವರು ತಮ್ಮ ಮೊಬೈಲ್ನಲ್ಲಿ ದಾಖಲಿಸಿಕೊಂಡಿದ್ದು, ಅದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ಕೊರೋನ ಸೋಂಕಿತನೋರ್ವ ಸೋಮವಾರ ರಾತ್ರಿ ಮೃತಪಟ್ಟಿದ್ದ. ಆತನ ಮರಣ ಪ್ರಮಾಣ ಪತ್ರ ನೀಡುವಂತೆ ಕುಟುಂಬಿಕರು ದಾದಿಯಲ್ಲಿ ವಿನಂತಿಸಿದ್ದರು. ಮರಣ ಪ್ರಮಾಣ ಪತ್ರವನ್ನು ತುರ್ತು ಕರ್ತವ್ಯದಲ್ಲಿದ್ದ ಹಿರಿಯ ವೈದ್ಯರು ನೀಡುತ್ತಾರೆ ಎಂದು ದಾದಿ ತಿಳಿಸಿದ್ದರು. ಮೃತನ ಕುಟುಂಬಿಕರು ಹಿರಿಯ ವೈದ್ಯರ ಬಳಿಕ ತೆರಳಿದರು. ಹಿರಿಯ ವೈದ್ಯರು ‘‘ರೋಗಿಯ ಸಾವನ್ನು ದೃಢೀಕರಿಸಿ ನೀವು ದಾದಿಯಿಂದ ಲಿಖಿತ ಪತ್ರ ಪಡೆಯಬೇಕು’’ ಎಂದು ಹೇಳಿದ್ದರು.
ಮೃತನ ಸಂಬಂಧಿಕರು ಮತ್ತೆ ದಾದಿಯ ಬಳಿಗೆ ಹಿಂದಿರುಗಿದರು. ಇದರಿಂದ ದಾದಿ ಕೋಪಗೊಂಡರು ಹಾಗೂ ವೈದ್ಯರನ್ನು ಪ್ರಶ್ನಿಸಿದರು. ಈ ಸಂದರ್ಭ ಇಬ್ಬರ ನಡುವೆ ವಾಗ್ವಾದ ನಡೆಯಿತು. ಆಕ್ರೋಶಿತಗೊಂಡ ನರ್ಸ್ ಇದ್ದಕ್ಕಿದ್ದಂತೆ ವೈದ್ಯರ ಕೆನ್ನೆಗೆ ಬಾರಿಸಿದರು. ವೈದ್ಯರು ಕೂಡ ದಾದಿಯ ಮೇಲೆ ದಾಳಿ ನಡೆಸಿದರು. ಈ ಸಂದರ್ಭ ವಾರ್ಡ್ನಲ್ಲಿದ್ದವರು ಅವರನ್ನು ಪ್ರತ್ಯೇಕಿಸಿದರು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದರು ಎನ್ನಲಾಗಿದೆ.
‘‘ನಾನು ಅವರಿಬ್ಬರೊಂದಿಗೆ ಮಾತುಕತೆ ನಡೆಸಿದ್ದೇನೆ. ಅವರು ಘಟನೆ ಬಗ್ಗೆ ಕ್ಷಮೆ ಕೋರಿದ್ದಾರೆ. ದೀರ್ಘಾವಧಿಯ ಕರ್ತವ್ಯ ನಿರ್ವಹಣೆಯಿಂದ ನಾವು ತೀವ್ರ ಒತ್ತಡದಲ್ಲಿ ಇದ್ದೆವು ಎಂದು ಅವರು ತಿಳಿಸಿದ್ದಾರೆ’’ ಎಂದು ನಗರ ದಂಡಾಧಿಕಾರಿ ರಾಮ್ಜಿ ಮಿಶ್ರಾ ಹೇಳಿದ್ದಾರೆ ಎಂದು ತಿಳಿದು ಬಂದಿದೆ.