ಪೂರ್ವಜರ ಗ್ರಾಮದಲ್ಲಿ ಪ್ರತ್ಯೇಕತಾವಾದಿ ನಾಯಕ ಮುಹಮ್ಮದ್ ಅಶ್ರಫ್ ಅಂತ್ಯಕ್ರಿಯೆ
ಶ್ರೀನಗರದಲ್ಲಿ ಅಂತ್ಯಕ್ರಿಯೆಗೆ ಪೊಲೀಸರು ಅವಕಾಶ ನೀಡಿಲ್ಲ: ಕುಟುಂಬಿಕರ ಆರೋಪ
ಶ್ರೀನಗರ, ಮೇ 7: ಪ್ರತ್ಯೇಕತಾವಾದಿ ನಾಯಕ ಮುಹಮ್ಮದ್ ಅಶ್ರಫ್ ಅವರ ಮೃತದೇಹದ ಅಂತ್ಯಕ್ರಿಯೆಯನ್ನು ಕುಪ್ವಾರದಲ್ಲಿರುವ ಅವರ
ಪೂರ್ವಜರ ಗ್ರಾಮದಲ್ಲಿ ಶುಕ್ರವಾರ ನಡೆಸಲಾಗಿದೆ. ಆದರೆ, ಶ್ರೀನಗರದ ಹುತಾತ್ಮರ ಸ್ಮಶಾನದಲ್ಲಿ ಅವರ ಅಂತ್ಯಕ್ರಿಯೆ ನಡೆಸಲು ಜಮ್ಮು
ಹಾಗೂ ಕಾಶ್ಮೀರ ಪೊಲೀಸರು ಅವಕಾಶ ನೀಡಲಿಲ್ಲ ಎಂದು ಅವರ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.
ಕಾರಾಗೃಹದಲ್ಲಿದ್ದ ಪ್ರತ್ಯೇಕತಾವಾದಿ ನಾಯಕ ಮುಹಮ್ಮದ್ ಅಶ್ರಫ್ ಅವರು ಜಮ್ಮುವಿನ ಆಸ್ಪತ್ರೆಯಲ್ಲಿ ಬುಧವಾರ ಕೊನೆಯುಸಿರೆಳೆದಿದ್ದರು.
‘‘ಪ್ರತ್ಯೇಕತಾವಾದಿ ನಾಯಕ ಮುಹಮ್ಮದ್ ಅಶ್ರಫ್ ಅವರ ಅಂತ್ಯಕ್ರಿಯೆಯನ್ನು ಕುಟುಂಬಿಕರ ಉಪಸ್ಥಿತಿಯಲ್ಲಿ ಪೂರ್ವಜರ ಗ್ರಾಮದಲ್ಲಿ
ಕುಟುಂಬದ ಸದಸ್ಯರ ಕೋವಿಡ್ ಶಿಷ್ಟಾಚಾರದಂತೆ ನಡೆಸಲಾಗಿದೆ’’ ಎಂದು ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ಅವರ ಹೇಳಿರುವುದನ್ನು
ಉಲ್ಲೇಖಿಸಿ ಜಮ್ಮು ಹಾಗೂ ಕಾಶ್ಮೀರ ಪೊಲೀಸರು ಟ್ವೀಟ್ ಮಾಡಿದ್ದಾರೆ.
ಆದರೆ, ಮುಹಮ್ಮದ್ ಅಶ್ರಫ್ ಅವರ ಕುಟುಂಬ, ‘‘ಅವರನ್ನು ಹುತಾತ್ಮರ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲು ನಾವು ಬಯಸಿದ್ದೆವು.
ಆದರೆ, ಪೊಲೀಸರು ಅವಕಾಶ ನೀಡಲಿಲ್ಲ’’ ಎಂದಿದ್ದಾರೆ.