ಪ್ರಧಾನಮಂತ್ರಿಗೆ ಪತ್ರ ಬರೆದ 12 ಪ್ರತಿಪಕ್ಷ ನಾಯಕರು
ಸೆಂಟ್ರಲ್ ವಿಸ್ಟಾ ಯೋಜನೆ ಸ್ಥಗಿತಗೊಳಿಸಿ, ಕೊರೋನ ವಿರುದ್ಧ ಹೋರಾಡಲು ಆಗ್ರಹ
ಹೊಸದಿಲ್ಲಿ: ಕೊರೋನವೈರಸ್ ವಿರುದ್ಧ ಉಚಿತ ಸಾಮೂಹಿಕ ವ್ಯಾಕ್ಸಿನೇಷನ್ ಅಭಿಯಾನವನ್ನುನಡೆಸುವಂತೆ ಕೋರಿ 12 ವಿರೋಧ ಪಕ್ಷಗಳ ನಾಯಕರು ಬುಧವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.
ಸೆಂಟ್ರಲ್ ವಿಸ್ಟಾ ಪುನರುಜ್ಜೀವನಗೊಳಿಸುವ ಯೋಜನೆಯನ್ನು ಸ್ಥಗಿತಗೊಳಿಸಿ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಆ ಹಣವನ್ನು ಬಳಸಿಕೊಳ್ಳಬೇಕು. ಅಗತ್ಯವಿರುವವರಿಗೆ ಆಹಾರ ಧಾನ್ಯಗಳನ್ನು ಒದಗಿಸಬೇಕು ಹಾಗೂ ನಿರುದ್ಯೋಗಿಗಳಿಗೆ ತಿಂಗಳಿಗೆ 6,000 ರೂ. ಹಾಗೂ ವಿವಾದಾತ್ಮಕ ಮೂರು ಕೇಂದ್ರ ಕೃಷಿ ಕಾನೂನುಗಳನ್ನು ರದ್ದುಪಡಿಸುವಂತೆ ಕೆಲವು ಮುಖ್ಯಮಂತ್ರಿಗಳು ಸೇರಿದಂತೆ ಪ್ರತಿಪಕ್ಷದ ನಾಯಕರು ಪ್ರಧಾನಮಂತ್ರಿಗಳಿಗೆ ಬರೆದಿರುವ ಜಂಟಿ ಪತ್ರದಲ್ಲಿ ಒತ್ತಾಯಿಸಿದ್ದಾರೆ. ಕೃಷಿ ಕಾಯ್ದೆಗಳ ರದ್ದತಿಯಿಂದ ಲಕ್ಷಾಂತರ ‘ಅನ್ನದಾತರು’ಗಳು ಸಾಂಕ್ರಾಮಿಕ ರೋಗಕ್ಕೆ ಬಲಿಯಾಗದಂತೆ ರಕ್ಷಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
*ಲಭ್ಯವಿರುವ ಜಾಗತಿಕ ಮತ್ತು ದೇಶೀಯ ಎಲ್ಲಾ ಮೂಲಗಳಿಂದ ಲಸಿಕೆಗಳನ್ನು ಖರೀದಿಸಬೇಕು.
* ತಕ್ಷಣವೇ ಉಚಿತ, ಸಾರ್ವತ್ರಿಕ ಸಾಮೂಹಿಕ ವ್ಯಾಕ್ಸಿನೇಷನ್ ಅಭಿಯಾನ ಆರಂಭಿಸಬೇಕು
* ದೇಶೀಯ ಲಸಿಕೆ ಉತ್ಪಾದನೆಯನ್ನು ವಿಸ್ತರಿಸಲು ಕಡ್ಡಾಯ ಪರವಾನಗಿ ನೀಡಬೇಕು.
* ಲಸಿಕೆಗಳಿಗಾಗಿ 35,000 ಕೋಟಿ ರೂ. ಬಜೆಟ್ ಹಂಚಿಕೆ ಮಾಡಬೇಕು.
* ಸೆಂಟ್ರಲ್ ವಿಸ್ಟಾ ನಿರ್ಮಾಣವನ್ನು ನಿಲ್ಲಿಸಿ, ಆ ಹಣವನ್ನು ಆಮ್ಲಜನಕ ಮತ್ತು ಲಸಿಕೆಗಳಿಗೆ ಬಳಸಬೇಕು.
* 'ಲೆಕ್ಕವಿಲ್ಲದ ಖಾಸಗಿ ಟ್ರಸ್ಟ್ ಫಂಡ್' ನಲ್ಲಿರುವ ಎಲ್ಲಾ ಹಣವನ್ನು ಬಿಡುಗಡೆ ಮಾಡುವುದು, ಲಸಿಕೆಗಳು, ಆಮ್ಲಜನಕ ಮತ್ತು ವೈದ್ಯಕೀಯ ಉಪಕರಣಗಳನ್ನು ಖರೀದಿಸಲು ಪಿಎಮ್ ಕೇರ್ಸ್ ನಿಧಿಯನ್ನು ಬಳಸಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸಿವೆ.